ಉದಯವಾಹಿನಿ , ಚಿಕ್ಕ ಕೆಲಸವಾದರೂ ದೊಡ್ಡ ಮೌಲ್ಯ ಹೊಂದಿರುವ ಪ್ರಾಮಾಣಿಕತೆ ಸಮಾಜಕ್ಕೆ ಮಾದರಿ ಆಗಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಘಟನೆ ಇದು. ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕೆಯಾಗಿ ಕೆಲಸ ಮಾಡುವ ಪದ್ಮ ಅವರ ನಿಸ್ವಾರ್ಥ ಸೇವೆಗೆ ಸೂಪರ್ಸ್ಟಾರ್ ರಜಿನಿಕಾಂತ್ ಸ್ವತಃ ಗೌರವ ಸಲ್ಲಿಸಿದ್ದಾರೆ. ತಮ್ಮ ನಿವಾಸದಲ್ಲಿ ಸ್ವಚ್ಛತಾ ಕಾರ್ಮಿಕೆ ಪದ್ಮ ಅವರನ್ನು ಭೇಟಿ ಮಾಡಿದ ರಜಿನಿಕಾಂತ್, ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿ ಚಿನ್ನದ ಸರ ನೀಡಿದ್ದಾರೆ. ಈ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ತಿಂಗಳ ಆರಂಭದಲ್ಲಿ ಟಿ ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪದ್ಮ ಅವರಿಗೆ ರಸ್ತೆಯಲ್ಲಿ ಒಂದು ಚೀಲ ಸಿಕ್ಕಿತ್ತು. ಅದರಲ್ಲಿ ಸುಮಾರು 45 ಪವನ್ ಚಿನ್ನದ ಆಭರಣಗಳು ಇದ್ದವು. ಯಾವುದೇ ಹಿಂಜರಿಕೆಯಾಗದೆ ಪದ್ಮ ಅವರು ವಿಷಯವನ್ನು ತಕ್ಷಣ ತಮ್ಮ ಮೇಲಧಿಕಾರಿಗಳಿಗೆ ತಿಳಿಸಿ, ನಂತರ ಆ ಚೀಲವನ್ನು ಪೊಂಡಿ ಬಜಾರ್ ಪೊಲೀಸರಿಗೆ ಹಸ್ತಾಂತರಿಸಿದರು. ಪೊಲೀಸ್ ತನಿಖೆಯ ಬಳಿಕ ಚಿನ್ನವನ್ನು ನಿಜವಾದ ಮಾಲೀಕರಿಗೆ ಹಿಂತಿರುಗಿಸಲಾಯಿತು. ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಪದ್ಮ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಿದರು. ರಜಿನಿಕಾಂತ್ ಅವರು ಪದ್ಮ ಅವರ ಸೇವಾಭಾವಕ್ಕೆ ಅಭಿನಂದನೆ ಸಲ್ಲಿಸಿ, ಸಮಾಜಕ್ಕೆ ಅವರು ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದರು.
