ಉದಯವಾಹಿನಿ, ಭಾರತೀಯ ಚಿತ್ರರಂಗದಲ್ಲಿ ಈಗ ‘ರಾಮಾಯಣ’ದ ಅಲೆ ಎದ್ದಿದೆ. ಒಂದೆಡೆ ರಣಬೀರ್ ಕಪೂರ್ ಮತ್ತು ಯಶ್ ಕಾಂಬಿನೇಷನ್ನ ಸಿನಿಮಾ ದೀಪಾವಳಿಗೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಜಗತ್ಪಸಿದ್ಧ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಮಹೇಶ್ ಬಾಬು ಜೊತೆ ಸೇರಿ ಪೌರಾಣಿಕ ಕಥೆಯೊಂದನ್ನು ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ ಎಂಬ ಗುಸುಗುಸು ದಟ್ಟವಾಗಿದೆ.
ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ‘ವಾರಣಾಸಿ’ ಎಂಬ ಹೆಸರು ಕೇಳಿಬರುತ್ತಿದೆ. ಈ ಚಿತ್ರದ ಕಥೆಯ ಬಗ್ಗೆ ಇದ್ದ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ಸ್ವತಃ ಮಹೇಶ್ ಬಾಬು ಅವರೇ ತಾವು ರಾಮನ ಪಾತ್ರ ನಿರ್ವಹಿಸುತ್ತಿರುವುದಾಗಿ ಸುಳಿವು ನೀಡಿದ್ದಾರೆ. ಆಧುನಿಕ ನಟನೆಯ ಚೌಕಟ್ಟು ಮೀರಿ, ಪೌರಾಣಿಕ ಪಾತ್ರದ ಗಾಂಭೀರ್ಯಕ್ಕೆ ತಕ್ಕಂತೆ ಮಹೇಶ್ ಸಿದ್ಧತೆ ನಡೆಸುತ್ತಿದ್ದಾರೆ.
ಕೇವಲ ಎರಡು ಪ್ರಮುಖ ಶಾಟ್ಗಳ ಪರ್ಫೆಕ್ಷನ್ಗಾಗಿ ಮಹೇಶ್ ಬಾಬು ಬರೋಬ್ಬರಿ ಆರು ತಿಂಗಳು ವಿಶೇಷ ತರಬೇತಿ ಪಡೆದಿದ್ದಾರೆ. “ರಾಮನ ಪಾತ್ರಕ್ಕೆ ಒಂದು ವಿಶಿಷ್ಟವಾದ ಭಂಗಿ ಬೇಕು. ನಾನು ಸಾಮಾನ್ಯ ಮನುಷ್ಯನಂತೆ ನಿಲ್ಲುವಂತಿಲ್ಲ. ಇದಕ್ಕಾಗಿ ಕಳರಿಪಯಟ್ಟು ಸೇರಿದಂತೆ ಹಲವು ಸಮರ ಕಲೆಗಳನ್ನು ಅಭ್ಯಾಸ ಮಾಡಿದ್ದೇನೆ,’ ಎಂದು ಮಹೇಶ್ ಹಂಚಿಕೊಂಡಿದ್ದಾರೆ.
