ಉದಯವಾಹಿನಿ, ಕಾರವಾರ: ಶಿರವಾಡ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮುಂಜಾನೆ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಹರಸಾಹಸಪಟ್ಟರು.ಸಂಗ್ರಹಗೊಂಡಿದ್ದ ಪ್ಲಾಸ್ಟಿಕ್ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಪಸರಿಸಿದ್ದು ಸುತ್ತಮುತ್ತಲೂ ಮನೆಗಳಿದ್ದು ಜನ ಭಯದಲ್ಲಿ ಇರುವಂತೆ ಮಾಡಿತ್ತು.
ಸ್ಥಳದಲ್ಲಿ ನಗರಸಭಾ ಕಮಿಷನರ್ ಜಗದೀಶ್ ಹುಲಗಜ್ಜಿ ಆಗಮಿಸಿ ಬೆಂಕಿ ನಂದಿಸಲು ಬೇಕಾದ ವ್ಯವಸ್ಥೆ ಮಾಡಿದರು. ಆದರೆ, ಬೆಂಕಿಯ ಕೆನ್ನಾಲಿಗೆ ಇಡೀ ಕಸ ಸಂಗ್ರಹಾಲಯವನ್ನು ಆವರಿಸಿದ್ದು, ಅಂಕೋಲದಿಂದ ಎರಡು ಅಗ್ನಿಶಾಮಕ ವಾಹನ ತರಿಸಿ ಬೆಂಕಿ ನಂದಿಸುವ ಕಾರ್ಯ ಮಾಡಲಾಯಿತು. ಸುಮಾರು ಆರು ಗಂಟೆಗಳ ಕಾರ್ಯಾಚರಣೆಯಲ್ಲಿ ಬೆಂಕಿ ತಹಬದಿಗೆ ಬಂದಿದ್ದು, ಸುತ್ತಮುತ್ತಲ ಮನೆಗಳಿಗೆ ಯಾವುದೇ ಹಾನಿ ಸಂಭವಿಸಲಿಲ್ಲ. ಘಟನೆ ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹಾನಿಯ ಅಂದಾಜು ತಿಳಿದು ಬರಬೇಕಿದೆ.
