ಉದಯವಾಹಿನಿ, ಕಾನ್ಪುರ: ಉದ್ಯಮಿಯೊಬ್ಬನ ಪುತ್ರ ಚಲಾಯಿಸುತ್ತಿದ್ದ ಲ್ಯಾಂಬೋರ್ಘಿನಿ ಕಾರು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಆರು ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ದುಬಾರಿ ಗ್ವಾಲ್ಟೋಲಿ ಪ್ರದೇಶದಲ್ಲಿ ನಡೆದಿದೆ.
ರೆವ್ -3 ಮಾಲ್ ಬಳಿ ಮಧ್ಯಾಹ್ನ 3.15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಉದ್ಯಮಿ ಕೆ.ಕೆ. ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಚಲಾಯಿಸುತ್ತಿದ್ದ ಐಷಾರಾಮಿ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನಿಂತಿದ್ದ ಜನರು ಮತ್ತು ಹಲವಾರು ವಾಹನಗಳ ಮೇಲೆ ಡಿಕ್ಕಿ ಹೊಡೆದಿದ್ದು, ಆ ಪ್ರದೇಶದಲ್ಲಿ ಭೀತಿ ಉಂಟಾಯಿತು ಎಂದು ಡಿಸಿಪಿ (ಕೇಂದ್ರ) ಅತುಲ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಕಾರು ಮೊದಲು ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದೆ. ನಂತರ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದು, ಸವಾರ ಸುಮಾರು 10 ಅಡಿ ಎತ್ತರಕ್ಕೆ ಹಾರಿದನು. ಬೈಕ್ ‌ಮುಂಭಾಗದ ಚಕ್ರವನ್ನು ಸ್ವಲ್ಪ ದೂರ ಎಳೆದುಕೊಂಡು ಹೋದ ಕಾರು, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿತು.ಯಮುನಾಗಂಜ್ ನಿವಾಸಿ ತೌಫೀಕ್ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಅವರು ಹಲವಾರು ಮೀಟರ್ ದೂರ ಎಸೆಯಲ್ಪಟ್ಟು ಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರರಿಗೆ ಮೂಳೆ ಮುರಿತ ಮತ್ತು ಮೂಗೇಟುಗಳು ಉಂಟಾಗಿವೆ.

Leave a Reply

Your email address will not be published. Required fields are marked *

error: Content is protected !!