ಉದಯವಾಹಿನಿ, ಉಡುಪಿ: ಅಬಕಾರಿ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಏನೂ ಮಾತನಾಡಿಲ್ಲ. ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ವಿರೋಧ ಪಕ್ಷದ ವೈಫಲ್ಯದ ಲಾಭ ಆಡಳಿತ ಪಕ್ಷಕ್ಕೆ ಸಿಕ್ಕಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಉಡುಪಿಯಲ್ಲಿ ಮಾತನಾಡಿದ ಯತ್ನಾಳ್, ಈ ಬಾರಿ ಅಧಿವೇಶನದಲ್ಲಿ ಜನರ ತೆರಿಗೆ ಹಣ ಹಾಳು ಮಾಡುವ ಕೆಲಸವಾಯಿತು. ಕೇಂದ್ರ ಸರ್ಕಾರ ಮತ್ತು ಮೋದಿ ಅವರನ್ನು ಟೀಕೆ ಮಾಡಲು ಕರೆದ ಅಧಿವೇಶನ. ಜಿ ರಾಮ್ ಜಿ ಬಗ್ಗೆ ಸರಿಯಾದ ಚರ್ಚೆ ಆಗಲಿಲ್ಲ. ಅಬಕಾರಿ ಇಲಾಖೆ ಭ್ರಷ್ಟಾಚಾರ ತಾರ್ಕಿಕ ಅಂತ್ಯವಾಗಿಲ್ಲ. ಇದೊಂದು ಅರ್ಥಹೀನ ಅಧಿವೇಶನ. ಕೇಂದ್ರ ಸರ್ಕಾರದ ಪ್ರತಿನಿಧಿಯಾದ ರಾಜ್ಯಪಾಲರಿಂದ ಕೇಂದ್ರವನ್ನೇ ಟೀಕೆ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜ್ಯ ಮತ್ತು ಕೇಂದ್ರದ ಸಂಬಂಧ ಹಾಳಾಗುತ್ತದೆ. ಶಾಸಕರ ಸಂಬಳ ಭತ್ಯೆಗಾಗಿ ಅಧಿವೇಶನ ನಡೆಯಿತು. ಅಬಕಾರಿ ಇಲಾಖೆ ಭ್ರಷ್ಟಾಚಾರ ವಿಪಕ್ಷ ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸರ್ಕಾರದ ವೈಫಲ್ಯ ಹೇಳಲ್ಲ. ವಿಧಾನಸಭೆಯಲ್ಲೂ ಮಾತನಾಡಲ್ಲ, ಬಹಿರಂಗವಾಗಿಯೂ ಮಾತನಾಡಲ್ಲ. ಸದನದಲ್ಲಿ ಕುಳಿತುಕೊಳ್ಳುವುದಿಲ್ಲ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ. ಜಿ ರಾಮ್ ಜಿ ಬಗ್ಗೆ ರಾಜ್ಯ ಸರ್ಕಾರ ಮೂಡಿಸಿದ ತಪ್ಪು ಅಭಿಪ್ರಾಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಹೋಗಲಾಡಿಸುವಲ್ಲಿ ವಿಫಲವಾಗಿದ್ದಾರೆ. ವಿರೋಧ ಪಕ್ಷದ ನಾಯಕರು ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
