ಉದಯವಾಹಿನಿ, ಹೈದರಾಬಾದ್: ಕೊರೋನಾ ಸಮಯದಲ್ಲಿ ಮುಚ್ಚಲಾಗಿದ್ದ ತೆಲಂಗಾಣ ಕಾರಾಗೃಹಗಳಲ್ಲಿ ಆಯುರ್ವೇದ ಚಿಕಿತ್ಸಾಲಯಗಳನ್ನು ಪುನರುಜ್ಜೀವನಗೊಳಿಸಲಾಗುವುದು. ಈ ಮೂಲಕ ಕೈದಿಗಳಿಗೆ ಹಾಗೂ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುವುದು ಕಾರಾಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಚಂಚಲಗುಡ ಕೇಂದ್ರ ಕಾರಾಗೃಹ ಮತ್ತು ಚೆರ್ಲಪಲ್ಲಿ ಓಪನ್ ಏರ್ ಜೈಲಿನಲ್ಲಿ ಈ ಸೌಲಭ್ಯಗಳು ಲಭ್ಯವಾಗುವಂತೆ ಕೆಲಸ ಮಾಡಲಾಗುತ್ತಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣ ರಚನೆಯ ಆರಂಭಿಕ ವರ್ಷಗಳಲ್ಲಿ, ಚಂಚಲಗುಡ ಮತ್ತು ವಾರಂಗಲ್ ಕೇಂದ್ರ ಕಾರಾಗೃಹಗಳು, ಸಂಗರೆಡ್ಡಿ ಜೈಲು ಮತ್ತು ಚೆರ್ಲಪಲ್ಲಿ ಓಪನ್ ಏರ್ ಜೈಲುಗಳಲ್ಲಿ ‘ಮೈ ನೇಷನ್ ಆಯುರ್ವೇದಿಕ್ ವಿಲೇಜ್’ ಹೆಸರಿನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆರಂಭದಲ್ಲಿ, ಚಂಚಲಗುಡ ಕೇಂದ್ರ ಕಾರಾಗೃಹವು ತಿಂಗಳಿಗೆ ಸರಾಸರಿ 3 ಲಕ್ಷ ರೂ.ಗಳ ಆದಾಯವನ್ನು ಗಳಿಸುತ್ತಿತ್ತು ಮತ್ತು ಅದನ್ನು ಉಳಿದ ಕಾರಾಗೃಹಗಳಿಗೂ ವಿಸ್ತರಿಸಲಾಯಿತು.
ಕೊರೊನಾ ಅವಧಿಯಲ್ಲಿ ಇವುಗಳಲ್ಲಿ ಚಿಕಿತ್ಸೆಗಳನ್ನು ನಿಲ್ಲಿಸಬೇಕಾಯಿತು. ಪರಿಸ್ಥಿತಿ ಸುಧಾರಿಸಿದ ನಂತರವೂ, ಹಿಂದೆ ಈ ಚಿಕಿತ್ಸೆಗಾಗಿ ತರಬೇತಿ ಪಡೆದ ಕೈದಿಗಳನ್ನು ಬಿಡುಗಡೆ ಮಾಡಿ ವೈದ್ಯರು ಬೇರೆಡೆ ಕರ್ತವ್ಯಕ್ಕೆ ಸೇರಿದ ಕಾರಣ ಕೇಂದ್ರಗಳು ಮತ್ತೆ ತೆರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಕಾರಾಗೃಹಗಳ ಮಹಾನಿರ್ದೇಶಕ ಸೌಮ್ಯ ಮಿಶ್ರಾ ಅವರು ಈ ಕೇಂದ್ರಗಳನ್ನು ತೆರೆದು ಸೇವೆಗಳನ್ನು ಒದಗಿಸಲು ನಿರ್ಧರಿಸಿದ್ದಾರೆ. ಅಗತ್ಯವಿರುವವರಿಗೆ ಕಡಿಮೆ ಬೆಲೆಯಲ್ಲಿ ಪಂಚಕರ್ಮ ಚಿಕಿತ್ಸೆ ಮತ್ತು ಸಾಮಾನ್ಯ ಆಯುರ್ವೇದ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುವುದುೆ. ಇದಕ್ಕಾಗಿ, ಪ್ರತಿ ಕೇಂದ್ರದಲ್ಲಿ ವೈದ್ಯರ ಜೊತೆಗೆ ಇಬ್ಬರು ಪುರುಷ ಮತ್ತು ಒಬ್ಬ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಚಿಕಿತ್ಸೆಯಲ್ಲಿ ಕೇರಳದ ವೈದ್ಯರಿಗೆ ಆದ್ಯತೆ ನೀಡಲಾಗುವುದು. ಕೈದಿಗಳಿಂದ ಸಿಬ್ಬಂದಿಯನ್ನು ಆಯ್ಕೆ ಮಾಡಿ, ತರಬೇತಿ ನೀಡಿ ನೇಮಿಸಲಾಗುತ್ತಿದೆ.
