ಉದಯವಾಹಿನಿ, ಚಿಕ್ಕಮಗಳೂರು: ತಾಲೂಕಿನ ಪುರ ಗ್ರಾಮದಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ. ಇದರ ಮಧ್ಯೆಯೇ ಶೃಂಗೇರಿಯ ಹೈವೆಯಲ್ಲಿನ ಕಣತಿ ಗ್ರಾಮದ ಬಳಿ ಒಂಟಿ ಸಲಗವೊಂದು ಬಿಂದಾಸ್ ರೌಂಡ್ಸ್ ಹಾಕುತ್ತಿದೆ. ಒಂಟಿ ಸಲಗದ ಓಡಾಟದಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಹಾವುಬಳುಕಿನ ರಸ್ತೆಯಾಗಿದ್ದರಿಂದ ವಾಹನ ಸವಾರರಿಗೆ ಆನೆ ಇರುವುದು ತಕ್ಷಣಕ್ಕೆ ತಿಳಿಯುವುದಿಲ್ಲ. ಇದರಿಂದಾಗಿ ಹೊರನಾಡು, ಶೃಂಗೇರಿ, ಕಳಸ ಕಡೆಗೆ ಸಾಗುವ ವಾಹನ ಸವಾರರು, ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ತಿರುವಿನಲ್ಲಿ ಸರಿಯಾಗಿ ನೋಡಿಕೊಂಡು ಸಾಗಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮತ್ತೊಂದೆಡೆ ತಾಲೂಕಿನ ಪುರ ಹಾಗೂ ಹುಣಸೆಹಳ್ಳಿ ಸುತ್ತಮುತ್ತ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೆರೆ ಕಾರ್ಯಾಚರಣೆ ನಡುವೆಯೇ ಹೆದ್ದಾರಿಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
