ಉದಯವಾಹಿನಿ, ಕೊಚ್ಚಿ: ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ವೈದ್ಯರು ಕತ್ತರಿಯನ್ನು ಹೊಟ್ಟೆಯ ಒಳಗಿಟ್ಟು ಹೊಲಿಗೆ ಹಾಕಿದ ಪ್ರಕರಣ 5 ವರ್ಷದ ನಂತರ ಬಳಕಿಗೆ ಬಂದಿದೆ. ಉಷಾ ಜೋಸೆಫ್‌ ಅವರು ಕೆಲ ವರ್ಷಗಳಿಂದ ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ತಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೇರಳ ಅಲಪ್ಪುಳ ವೈದ್ಯಕೀಯ ಕಾಲೇಜಿಗೆ ಹಲವು ಬಾರಿ ಹೋಗಿ ಪರೀಕ್ಷೆಗೆ ಒಳಗಾಗಿದ್ದಾರೆ.
ಪರೀಕ್ಷೆ ನಡೆಸಿದ ವೈದ್ಯರು ಏನು ಸಮಸ್ಯೆ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರೂ ಪದೇ ಪದೇ ಹೊಟ್ಟೆ ನೋವು ಬರುತ್ತಿರುವ ಕಾರಣ ಮೂತ್ರಕೋಶದಲ್ಲಿ ಕಿಡ್ನಿ ಸಮಸ್ಯೆ ಇರಬಹುದು ಎಂದು ಖಾಸಗಿ ವೈದ್ಯರ ಸಲಹೆಗೆ ಎಕ್ಸ್-ರೇ ಮಾಡಿದ್ದಾರೆ. ಪರೀಕ್ಷೆಯ ವೇಳೆ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಗೆ ಬಳಸಿದ್ದ ಉಪಕರಣ ಇರುವುದನ್ನು ನೋಡಿ ಹೌಹಾರಿದ್ದಾರೆ. ಈ ಬಗ್ಗೆ ಉಷಾ ಅವರ ಪುತ್ರ ಶಿಬಿನ್‌ ಪ್ರತಿಕ್ರಿಯಿಸಿ, ಉಷಾ ಅವರಿಗೆ ಗರ್ಭಕೋಶದಲ್ಲಿ ಗೆಡ್ಡೆ ಬೆಳೆದಿತ್ತು. ಈ ಗೆಡ್ಡೆ ತೆಗೆಸಲು 2021ರ ಮೇನಲ್ಲಿ ಅಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ಆಪರೇಷನ್‌ ಮಾಡಲಾಗಿದೆ. ಈ ಸರ್ಜರಿ ನಡೆಯುವಾಗ ಉಪಕರಣವನ್ನು ಹೊಟ್ಟೆಯ ಒಳಗಡೆ ಬಿಟ್ಟಿದ್ದಾರೆ ಎಂದು ದೂರಿದ್ದಾರೆ.

ಗರ್ಭಕೋಶದ ಆಪರೇಷನ್‌ ಬಳಿಕ ಅವರಿಗೆ ಹೊಟ್ಟೆ ನೋವು ಆರಂಭವಾಗಿತ್ತು. ಪದೇ ಪದೇ ಹೊಟ್ಟೆ ನೋವು ಆಗುತ್ತಿದೆ ಎಂದರೂ ಅಲಪ್ಪುಳ ವೈದ್ಯಕೀಯ ಕಾಲೇಜಿನವರು ಸರಿಯಾಗಿ ಪರೀಕ್ಷೆ ಮಾಡಿರಲಿಲ್ಲ. ಕೊನೆಗೆ ಖಾಸಗಿ ವೈದ್ಯರ ಬಳಿ ತೋರಿಸಿದಾಗ ವೈದ್ಯರ ಎಡವಟ್ಟು ಗೊತ್ತಾಗಿದೆ. ಈಗ ಉಷಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶನಿವಾರ ಶಸ್ತ್ರಚಿಕಿತ್ಸೆ ನಡೆಯಲಿದೆ. ಈಗ ಉಷಾ ಜೋಸೆಫ್‌ ಕುಟುಂಬಸ್ಥರು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ ವಿರುದ್ಧ ಅಂಬಲಪುಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!