ಉದಯವಾಹಿನಿ, ತಿರುಪುರ್ (ತಮಿಳುನಾಡು): ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಿದ್ದ 6 ಜನ ಬಾಂಗ್ಲಾದೇಶಿ ಪ್ರಜೆಗಳನ್ನು ದೆಹಲಿ ಪೊಲೀಸರು ಇಂದು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಅವರು ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವುದು ಗೊತ್ತಾಗಿದೆ.ದೇಶದಲ್ಲಿ ಉಗ್ರ ದಾಳಿ ನಡೆಯುವ ಶಂಕೆ ಹಿನ್ನೆಲೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸುವ ಕ್ರಮಗಳನ್ನು ಸಹ ತೀವ್ರಗೊಳಿಸಲಾಗಿದೆ. ಈ ವೇಳೆ, ದೆಹಲಿ ವಿಶೇಷ ವಿಭಾಗದ ಪೊಲೀಸರು, ಸಾಮಾಜಿಕ ಮಾಧ್ಯಮದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಪೋಸ್ಟ್ ಹಂಚಿಕೊಂಡಿದ್ದ ಆರು ಮಂದಿಯನ್ನು ಬಂಧಿಸಿದಾಗ, ಅವರು ಬಾಂಗ್ಲಾದೇಶಿ ಪ್ರಜೆಗಳು ಎಂಬುದು ಪತ್ತೆಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಹಿನ್ನೆಲೆ ಅದರ ಜಾಡು ಹಿಡಿದು ತಮಿಳುನಾಡಿನ ತಿರುಪುರಕ್ಕೆ ಬಂದ ದೆಹಲಿ ಪೊಲೀಸರು, ತಿರುಪುರ ನಗರ ಮತ್ತು ಜಿಲ್ಲಾ ಪೊಲೀಸರ ಸಹಾಯ ಕೋರಿದ್ದರು.
ಪಾಕ್ ಉಗ್ರ ಸಂಘಟನೆಗಳಿಗೆ ಬೆಂಬಲ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಿದ್ದ ಆರೋಪಿಗಳು ತಿರುಪುರದ ಉತುಕುಳಿ, ಪಲ್ಲಡಂ ಮತ್ತು ತಿರುಮುರುಗನ್ಪೂಂಡಿ ಪ್ರದೇಶಗಳಲ್ಲಿ ಅಡಗಿಕೊಂಡ ಬಗ್ಗೆ ಗುರುತಿಸಿದ್ದರು. ನಂತರ, ಇಂದು ಮುಂಜಾನೆ 6 ಮಂದಿಯನ್ನು ಬಂಧಿಸಲಾಯಿತು. ಇದರಲ್ಲಿ ಉತುಕುಳಿ ಪ್ರದೇಶದಲ್ಲಿ ಇಬ್ಬರು, ಪಲ್ಲಡಂನಲ್ಲಿ ಮೂವರು, ತಿರುಮುರುಗನ್ಪೂಂಡಿಯಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ಅವರನ್ನು ರಹಸ್ಯ ಸ್ಥಳದಲ್ಲಿ ಇರಿಸಿ ವಿಚಾರಣೆ ನಡೆಸಲಾಯಿತು. ಆ ಸಮಯದಲ್ಲಿ, ಅವರೆಲ್ಲರೂ ಬಾಂಗ್ಲಾದೇಶದವರು ಎಂದು ತಿಳಿದುಬಂದಿದೆ. ಅವರೆಲ್ಲರೂ ತಿರುಪ್ಪೂರಿನ ಬನಿಯನ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್ಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿ: ಕೆಲವು ಬಾಂಗ್ಲಾದೇಶಿಗರು ಈಗಾಗಲೇ ನಕಲಿ ಆಧಾರ್ ಕಾರ್ಡ್ಗಳು ಮತ್ತು ಇತರ ದಾಖಲೆಗಳೊಂದಿಗೆ ತಿರುಪ್ಪೂರಿಗೆ ಬಂದು ಬನಿಯನ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಇದರ ನಂತರ, ತಿರುಪ್ಪೂರು ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ನಕಲಿ ದಾಖಲೆಗಳೊಂದಿಗೆ ವಾಸಿಸುತ್ತಿರುವ ಬಾಂಗ್ಲಾದೇಶಿಗರನ್ನು ಬಂಧಿಸಲಾಗುತ್ತಿದೆ. ಇಲ್ಲಿಯವರೆಗೆ 6 ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 8 ಸೆಲ್ ಫೋನ್ಗಳು ಮತ್ತು 16 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
