ಉದಯವಾಹಿನಿ, ದಾವಣಗೆರೆ: ಓವರ್ ಡೋಸ್ ಇಂಜೆಕ್ಷನ್ ಚುಚ್ಚಿಕೊಂಡು ವೈದ್ಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವುದು ದಾವಣಗೆರೆ ನಗರದ ಖಾಸಗಿ ವೈದ್ಯಕೀಯ ಕಾಲೇಜ್ ಹಾಸ್ಟೆಲ್ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವೈದ್ಯ ವಿದ್ಯಾರ್ಥಿಯನ್ನು ಮಹಾರಾಷ್ಟ್ರ ಸತಾರ್ ಜಿಲ್ಲೆಯ ಕರಾಡ್ ಮೂಲದ ಸಿದ್ಧಾರ್ಥ ತ್ರಯಂಬಕೆ (30) ಎಂದು ಗುರುತಿಸಲಾಗಿದೆ. ಅವರು ದಾವಣಗೆರೆ ಖಾಸಗಿ ಮೆಡಿಕಲ್ ಕಾಲೇಜ್ನಲ್ಲಿ ಡರ್ಮಾಟಾಲಾಜಿ (ಚರ್ಮರೋಗ) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರು. ಅವರು ಹಾನಿಕಾರಕ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ರೂಮ್ ಲಾಕ್ ಆದ ಹಿನ್ನೆಲೆ ಸಂಶಯಗೊಂಡ ವಿದ್ಯಾರ್ಥಿಗಳು ಕೊಠಡಿ ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ವಿದ್ಯಾರ್ಥಿಯ ಪಾಲಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
