ಉದಯವಾಹಿನಿ, ಬೆಂಗಳೂರು: ಕುರ್ಚಿಗೆ ಕಂಟಕ ಬಂದಾಗ ಸಾಮಾಜಿಕ ನ್ಯಾಯ, ಜಾತಿಯನ್ನ ಸಿದ್ದರಾಮಯ್ಯ ಮುಂದೆ ತರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯರಿಂದ ಜಾತಿ ಅಸ್ತ್ರ ಪ್ರಯೋಗ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಪ್ರಜಾಪ್ರಭುತ್ವ ಬ್ಯೂಟಿ. ಸಿದ್ದರಾಮಯ್ಯ ಅವರೇ ಇದನ್ನ ಎಷ್ಟು ಸಾರಿ ಹೇಳ್ತೀರಾ, ಜಾಸ್ತಿ ಬಜೆಟ್ ಮಂಡಿಸಿದ್ದು ನೀವು. ಎರಡು ಸಾರಿ ಸಿಎಂ, ಡಿಸಿಎಂ ಎಲ್ಲವೂ ಆಗಿದ್ದೀರಾ. ಯಾರಿಗೆ ಹೇಳ್ತಿರಾ ಇದನ್ನ. ನೀವು ಸಿಎಂ ಆದ ಮೇಲೆ ಎಷ್ಡು ಜನ ಕುರಿ ಕಾಯೋರನ್ನ ಮೇಲೆ ತಂದಿದ್ದೀರಾ ಹೇಳಿ. ಯಾರಿಗೆ ಆರ್ಥಿಕ ಶಕ್ತಿ ಕೊಟ್ಟಿದ್ದೀರಾ ಹೇಳಿ. ನಿಮಗೆ ದೇವರು ಎಲ್ಲಾ ಕೊಟ್ಟಿದ್ದಾರೆ. ಇನ್ನೇನು ಬೇಕು, ಇನ್ನೇನು ಕೊಡಬೇಕು ಹೇಳಿ? ಸಮುದಾಯ ಎಷ್ಟು ಉದ್ಧಾರ ಆಗಿದೆ ಹೇಳಿ? ನೀವು ಚೆನ್ನಾಗಿ ಉದ್ಧಾರ ಆಗಿದ್ದೀರಾ. ಅದನ್ನ ಹೇಳೋದು ಬೇಡ. ಆದರೆ ಕುರಿಕಾಯೋ ಎಷ್ಟು ಜನರು ಮೇಲೆ ಬಂದಿದ್ದಾರೆ? ಅವರ ಕುಟುಂಬ ಮೇಲೆ ಬಂದಿದೆ ಹೇಳಿ ಎಂದು ಪ್ರಶ್ನೆ ಮಾಡಿದರು.
ಈಗ ಸಿದ್ದರಾಮಯ್ಯ ದಲಿತ ಸಿಎಂ ಅಂತ ಮಾತನಾಡುತ್ತಿದ್ದಾರೆ. ಪರಮೇಶ್ವರ್ ಅವರನ್ನ ಮಾತಾಡಿಸಿ 2018 ಚುನಾವಣೆಯಲ್ಲಿ ಸೋಲಿಸಿದ್ದು ಯಾರು ಅಂತ ಕೇಳಿ. ಕೆಪಿಸಿಸಿ ಅಧ್ಯಕ್ಷ ಅಗಿದ್ದ ಪರಮೇಶ್ವರ್ ಸೋಲಿಗೆ ಷಡ್ಯಂತ್ರ ಮಾಡಿದ್ದು ಯಾರು ಕೇಳಿ. ಅವರ ಸೋಲಿಗೆ ಕಾರಣ ಯಾರು ಅಂತ ಕೇಳಿದ್ರೆ ಯಾರು ಸಂವಿಧಾನ ಪುಸ್ತಕ ಹಿಡಿದು ಮಾತಾಡೋರು, ಬಸವಣ್ಣ, ಕುವೆಂಪು ಬಗ್ಗೆ ಮಾತಾಡೋರು, ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡೋರು ಷಡ್ಯಂತ್ರದ ಭಾಗ ಆಗಿದ್ರು ಅಂತ ಅವರ ನೋವಿನ ಕಥೆ ಹೇಳುತ್ತಾರೆ. ಅವರ ನೋವಿನ ಕಥೆ ಕೇಳಿದ್ರೆ ಯಾವ ಕಾರಣಕ್ಕೆ ಯಾವ ಯಾವ ಹೆಸರು ಮುನ್ನಲೆಗೆ ತರುತ್ತಾರೆ ಅನ್ನೋ ರಾಜಕೀಯ ಮರ್ಮ ನಿಮಗೆ ಅರ್ಥ ಆಗುತ್ತದೆ ಅಂತ ಸಿಎಂ ವಿರುದ್ದ ಕಿಡಿಕಾರಿದರು.
