ಉದಯವಾಹಿನಿ, ವಿಜಯಪುರ: ಸಾಮಾನ್ಯವಾಗಿ ಅತ್ತೆ, ಸೊಸೆ ಅಂದ್ರೆ ಹಾವು, ಮುಂಗುಸಿ ಥರ ಅಂತಾರೆ. ಆದರೆ 9 ತಿಂಗಳಿನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸೊಸೆಗೆ ಅತ್ತೆ ಕಿಡ್ನಿ ದಾನ ಮಾಡಿ ಮಾದರಿಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಳೂರು ಗ್ರಾಮದವರಾದ ಶಾಂತಾಬಾಯಿ, ಮಗ ಪ್ರಕಾಶನ ಹೆಂಡತಿ ಬಸಮ್ಮಗೆ ತಮ್ಮ ಒಂದು ಕಿಡ್ನಿ ನೀಡಿದ್ದಾರೆ.
ಸೊಸೆ ಬಸಮ್ಮ ಎರಡೂ ಕಿಡ್ನಿ ಫೇಲ್ ಆಗಿ ಕಳೆದ 9 ತಿಂಗಳಿಂದ ಬಳಲುತ್ತಿದ್ದರು. ಬಸಮ್ಮಗೆ ಯಾರೂ ಕೂಡ ಕಿಡ್ನಿ ಕೊಡಲು ಮುಂದಾಗಿರಲಿಲ್ಲ. ಹೀಗಾಗಿ ಅತ್ತೆ ಶಾಂತಾಬಾಯಿ ತನ್ನ ಒಂದು ಕಿಡ್ನಿ ಕೊಟ್ಟು ಸೊಸೆಗೆ ಮರು ಜೀವ ನೀಡಿದ್ದಾರೆ. ನನ್ನ ಮಗಳಾಗಿದ್ರೆ ನಾನು ಕಿಡ್ನಿ ಕೊಡುತ್ತಿರಲಿಲ್ವಾ, ಸೊಸೆ ಕೂಡ ಮಗಳು ಇದ್ದ ಹಾಗೆ. ಹೀಗಾಗಿ ಕಿಡ್ನಿ ನೀಡಿದ್ದೇನೆ ಎಂದಿದ್ದಾರೆ. ಇನ್ನು ಅತ್ತೆಯೇ ನನಗೆ ದೇವರ ಸಮಾನ ಅವರಿಂದಲೇ ನನಗೆ ಮರುಜೀವ ಸಿಕ್ಕಿದೆ ಎಂದು ಸೊಸೆ ಬಸಮ್ಮ ಕೃತಜ್ಞತೆ ಅರ್ಪಿಸಿದ್ದಾರೆ.
