ಉದಯವಾಹಿನಿ, ಉಜ್ಜಯಿನಿ(ಮಧ್ಯ ಪ್ರದೇಶ): ಮಹಾಶಿವರಾತ್ರಿ ಮುಗಿದು ಕೆಲವು ದಿನಗಳಾಗಿವೆ. ಆದರೆ, ಉಜ್ಜಯಿನಿ ಬದ್ನಗರ ತಹಸಿಲ್ನ ಬುಧೇಶ್ವರ ಮಹಾದೇವ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಸಂಭ್ರಮವನ್ನು ಇನ್ನೂ ಕಾಣಬಹುದು. ಇಲ್ಲಿ ಪ್ರತೀ ವರ್ಷ ಶಿವನಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಅದೂ ಕರೆನ್ಸಿ ನೋಟುಗಳಲ್ಲಿ.ಈ ಬಾರಿ 1 ಕೋಟಿ 31 ಲಕ್ಷ ರೂಪಾಯಿ ಮೌಲ್ಯದ ನೋಟುಗಳಿಂದ ದೇಗುಲದ ಅಲಂಕಾರ ಮಾಡಲಾಗಿದ್ದು, ವಿಶೇಷವಾಗಿ ಗಮನ ಸೆಳೆಯುತ್ತಿದೆ. ಅಚ್ಚರಿಯ ಸಂಗತಿ ಎಂದರೆ, ಇಷ್ಟು ದೊಡ್ಡ ಮೊತ್ತದ ಹಣದಿಂದ ಅಲಂಕರಿಸಿದರೂ ಇಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ.
ಮಹಾಶಿವರಾತ್ರಿ ಹಬ್ಬದ ಸಮಯದಲ್ಲಿ ಬುದ್ಧೇಶ್ವರ ಮಹಾದೇವ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ದೇಗುಲದ ನೋಟಿನ ವಿಶೇಷ ಅಲಂಕಾರ ಹೆಚ್ಚೆಚ್ಚು ಭಕ್ತರನ್ನು ಸೆಳೆಯುತ್ತಿದೆ.”10 ರೂಪಾಯಿಂದ 500 ರೂ.ವರೆಗಿನ ನೋಟುಗಳಿಂದ ಅಲಂಕಾರ ಮಾಡಲಾಗಿದೆ. ಇದರ ಒಟ್ಟು ಮೊತ್ತ ಸುಮಾರು 1 ಕೋಟಿ 31 ಲಕ್ಷ ರೂಪಾಯಿ. ಈ ಅಲಂಕಾರದ ಕೆಲಸಕ್ಕೆ 48 ಗಂಟೆ ಬೇಕಾಯಿತು. ಅಲಂಕಾರ ನೋಡಲು ಬಹಳ ಆಕರ್ಷಕವಾಗಿದೆ” ಎಂದು ದೇವಾಲಯ ಸಮಿತಿಯ ಸದಸ್ಯೆ ಐಶ್ವರ್ಯ ಸಿಂಗ್ ಸೋನಗರ ತಿಳಿಸಿದರು.
ಭದ್ರತೆಯ ಜವಾಬ್ದಾರಿ ಮಹಾದೇವನದ್ದೇ!: ದೇವಾಲಯದ ಅಲಂಕಾರಕ್ಕಾಗಿ ಇಷ್ಟು ದೊಡ್ಡ ಮೊತ್ತದ ಹಣ ಬಳಸಲಾದರೂ ಇಲ್ಲಿ ಪೊಲೀಸರು ಅಥವಾ ಭದ್ರತಾ ಸಿಬ್ಬಂದಿ ಕಾಣಸಿಗುವುದಿಲ್ಲ. ಭದ್ರತೆಯ ಹೊಣೆ ಮಹಾದೇವನದ್ದೇ ಎನ್ನುತ್ತಾರೆ ದೇಗುಲದ ಪ್ರಮುಖರು.
ಅರ್ಚಕ ಮಹೇಶ್ಯಾಮ್ ಮತ್ತು ಭಕ್ತ ರಾಧೇಶ್ಯಾಮ್ ಮಾತನಾಡಿ, “2021ರಲ್ಲಿ ₹7 ಲಕ್ಷ, 2022ರಲ್ಲಿ 11 ಲಕ್ಷ, 2023ರಲ್ಲಿ 21 ಲಕ್ಷ, 2024ರಲ್ಲಿ 51 ಲಕ್ಷ, 2025ರಲ್ಲಿ 70 ಲಕ್ಷ ಮತ್ತು ಈ ವರ್ಷ 1 ಕೋಟಿ 31 ಲಕ್ಷ ರೂಪಾಯಿ ಹಣವನ್ನು ಅಲಂಕಾರಕ್ಕೆ ಬಳಸಲಾಗಿದೆ” ಎಂದು ಮಾಹಿತಿ ನೀಡಿದರು. “ಭಕ್ತರು ದೇವಾಲಯಕ್ಕೆ ಉದಾರವಾಗಿ ಹಣ ನೀಡುತ್ತಿದ್ದಾರೆ. 50 ಸಾವಿರದಿಂದ 10 ಲಕ್ಷದವರೆಗೂ ನೀಡುತ್ತಾರೆ” ಎಂದು ದೇವಾಲಯ ಸಮಿತಿಯ ಸಂದೀಪ್ ತಿಳಿಸಿದರು.
