ಉದಯವಾಹಿನಿ, ಗದಗ: ದಲಿತರಿಗೆ ಕ್ಷೌರ ಮಾಡಲು ಸವರ್ಣೀಯರು ನಿರಾಕರಿಸಿದ್ದಕ್ಕೆ ಸರ್ಕಾರವೇ ಕ್ಷೌರದಂಗಡಿ ಆರಂಭ ಮಾಡಿಸಿರುವ ಘಟನೆ ಗದಗ ಜಿಲ್ಲೆ ಶಿಂಗಟಾಲೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಅನೇಕ ವರ್ಷಗಳಿಂದ ದಲಿತರಿಗೆ ಕ್ಷೌರ ಮಾಡುತ್ತಿರಲಿಲ್ಲ. ಈ ಬಗ್ಗೆ ಪಬ್ಲಿಕ್ ಟಿವಿ ಈ ಹಿಂದೆ ವರದಿ ಪ್ರಸಾರ ಮಾಡಿತ್ತು. ಈಗ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಶಿವಶರಣ ಹಡಪದ ಅಪ್ಪಣ್ಣ ಸಮಾಜ ವತಿಯಿಂದ ಕ್ಷೌರದಂಗಡಿ ಆರಂಭಿಸಲಾಗಿದೆ.
ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಮೂಲಕ ಸಾಮರಸ್ಯ ಬದುಕು ಗ್ರಾಮದ ಬೆಳಕು ಕಾರ್ಯಕ್ರಮ ಮೂಲಕ ಕ್ಷೌರದಂಗಡಿ ತೆರೆಯಲಾಗಿದೆ. ಪಕ್ಕದ ತಿಪ್ಪಾಪೂರ ಗ್ರಾಮದ ಬಸವರಾಜ್ ಹಡಪದ ಅವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅಂಗಡಿ ನೀಡಿ ಕ್ಷೌರ ಮಾಡಲು ಅನುವು ಮಾಡಿಕೊಡಲಾಗಿದೆ.
ಪ್ರತಿವರ್ಷ ಮಹಾನವಮಿಯಂದು ವೀರಭದ್ರೇಶ್ವರ ಸ್ವಾಮಿ ದೇವರು ಹಡಪದ ಸಮಾಜದವರ ಮನೆಗೆ ಭೇಟಿ ನೀಡುತ್ತಾರೆ ಎಂಬ ನಂಬಿಕೆ ಇದ್ದು, ಆ ಸಂದರ್ಭದಲ್ಲಿ ದಲಿತರಿಗೆ ಕ್ಷೌರ ಮಾಡಿದರೆ ಕೆಟ್ಟದಾಗುತ್ತದೆ ಎಂಬ ಮೂಢನಂಬಿಕೆಯನ್ನು ಕೆಲವರು ಬಿತ್ತಿದ್ದರು.ಕ್ಷೌರ ನಿಲ್ಲಿಸಿದ್ದರಿಂದ ಗ್ರಾಮದ ಜನರು ಅಕ್ಕ ಪಕ್ಕದ ಊರುಗಳಿಗೆ ತೆರಳಿ ಕ್ಷೌರ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಸ್ಥಳಿಯ ದಲಿತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈಗ ಅಧಿಕಾರಿಗಳ ನೇತೃತ್ವದಲ್ಲಿ ಕ್ಷೌರದಂಗಡಿ ಆರಂಭಿಸಲಾಗಿದೆ. ಈ ವೇಳೆ ಅನೇಕ ಅಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು.
