ಉದಯವಾಹಿನಿ, ಬಳ್ಳಾರಿ: ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದ್ದು, ಪ್ರವಾಸಕ್ಕೆಂದು ತೆರಳಿದ್ದ ಬಳ್ಳಾರಿ ಮೂಲದ 35 ಪ್ರವಾಸಿಗರು ದುಬೈನಲ್ಲಿ ಸಿಲುಕಿ ಪರದಾಡುವಂತಾಗಿದೆ.
35 ಪ್ರವಾಸಿಗರ ಪೈಕಿ ಒಂದೇ ಕುಟುಂಬದ 15 ಜನರು ದುಬೈನಲ್ಲಿ ಲಾಕ್ ಆಗಿದ್ದಾರೆ. ಬಳ್ಳಾರಿಯ ಯಾಳ್ಪಿ ಪಂಪನಗೌಡ ಕುಟುಂಬಸ್ಥರು ಕುಟುಂಬ ಸಮೇತರಾಗಿ ದುಬೈ ಪ್ರವಾಸಕ್ಕೆ ತೆರಳಿದ್ದರು. ಯಾಳ್ಪಿ ಪಂಪನಗೌಡ ಕುಟುಂಬದ 15 ಜನ ಸೇರಿ ಬಳ್ಳಾರಿಯಿಂದ 35 ಜನ ದುಬೈ ಪ್ರವಾಸಕ್ಕೆ ತೆರಳಿದ್ದರು. ಇರಾನ್-ಇಸ್ರೇಲ್ ಯುದ್ಧ ಹಿನ್ನೆಲೆ ವಿಮಾನ ಹಾರಾಟ ವ್ಯತ್ಯಯದಿಂದಾಗಿ ಸದ್ಯ 35 ಪ್ರವಾಸಿಗರು ದುಬೈನಲ್ಲೇ ಉಳಿದುಕೊಂಡಿದ್ದಾರೆ. ದುಬೈನಲ್ಲಿ ಸಿಲುಕಿರುವ ಪ್ರವಾಸಿಗರು ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಾವುದೇ ಆತಂಕ ಇಲ್ಲ, ನಾವು ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರ ಜೊತೆ ಪ್ರವಾಸಿಗರು ಹೇಳಿದ್ದಾರೆ.
ಈಗಾಗಲೇ ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ಕೂಡಾ ಸಂಪರ್ಕ ಮಾಡಿದ್ದಾರೆ. ನಾಳೆ ವಿಮಾನ ಹಾರಾಟ ಆರಂಭ ಆಗುತ್ತೆ ಅಂತಾ ಹೇಳಿದ್ದಾರೆ. ನಾಳೆ ವಾಪಸ್ ಬರುವ ವಿಶ್ವಾಸ ಇದೆ ಎಂದು ಯಾಳ್ಪಿ ಪಂಪನಗೌಡ ಪುತ್ರ ದಿವಾಕರ್ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದಾರೆ.
