
ಉದಯವಾಹಿನಿ, ಬೆಂಗಳೂರು: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದಿಂದ ವಾಯು ಪ್ರದೇಶ ಮತ್ತೆ ಬಂದ್ ಮಾಡಲಾಗಿದೆ. ಇದರಿಂದಾಗಿ ಬೆಂಗಳೂರಿಂದ ದುಬೈಗೆ 113 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ವಿಮಾನ ವಾಪಸ್ ಆಗಿದೆ.
ಬೆಂಗಳೂರು ಏರ್ಪೋರ್ಟ್ನಿಂದ ಇಂದು (ಮಾ.3) ಮುಂಜಾನೆ 04:30ಕ್ಕೆ ಎಮಿರೇಟ್ಸ್ ವಿಮಾನ ಟೇಕಾಫ್ ಆಗಿತ್ತು. ಆದರೆ ಭಾರತದ ಗಡಿ ದಾಟುವಷ್ಟರಲ್ಲಿ ದುಬೈ ವಾಯು ಪ್ರದೇಶ ಬಂದ್ ಮಾಡಲಾಗಿದೆ. ಬಂದ್ ಆದ ಕಾರಣ ಹೋದ ಮಾರ್ಗದಲ್ಲೇ ಮತ್ತೆ ವಿಮಾನ ವಾಪಸ್ ಆಗಿದೆ. ಇದರಿಂದ ದುಬೈಗೆ ಹೊರಟಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಯುದ್ಧದಿಂದಾಗಿ ಇಂದು ಬೆಂಗಳೂರು ಏರ್ಪೋರ್ಟ್ನಿಂದ 42 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಆಗಮಿಸಬೇಕಾದ 21 ಮತ್ತು ನಿರ್ಗಮಿಸಬೇಕಾದ 21 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಅಬುದಾಬಿ, ರಿಯಾದ್, ದುಬೈ, ದೋಹಾ, ದಮ್ಮನ್ ಸೇರಿ ಹಲವು ಭಾಗಗಳಿಂದ ಬರಬೇಕಿದ್ದ, ಅಲ್ಲಿಗೆ ಹೋಗಬೇಕಿದ್ದ ವಿಮಾನಗಳ ಹಾರಟ ರದ್ದು ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ.
