ಉದಯವಾಹಿನಿ, ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ಉಲ್ಬಣಗೊಳ್ಳುತ್ತಿದ್ದು ಬೆಲೆ ಏರಿಕೆ ಆತಂಕ ಮನೆಮಾಡಿದೆ. ಆದರೆ, ಕಚ್ಚಾ ತೈಲ ಮತ್ತು ಅನಿಲದ ವಿಷಯದಲ್ಲಿ ಭಾರತ ಆರಾಮದಾಯಕ ಸ್ಥಾನದಲ್ಲಿದೆ ಎಂದು ಮೂಲಗಳು ತಿಳಿಸಿವೆ.ಕಚ್ಚಾ ತೈಲ, LPG ಮತ್ತು LNGಗಳಿಗೆ ಸಂಬಂಧಿಸಿದಂತೆ ನಾವು ಸಾಕಷ್ಟು ಆರಾಮದಾಯಕ ಸ್ಥಿತಿಯಲ್ಲಿದ್ದೇವೆ. ನಮ್ಮಲ್ಲಿ 25 ದಿನಗಳ ಕಚ್ಚಾ ತೈಲ ಮತ್ತು 25 ದಿನಗಳ ಸಾಗಣೆಯಲ್ಲಿರುವ ಉತ್ಪನ್ನಗಳ ದಾಸ್ತಾನು ಇದೆ ಎಂದು ಭಾರತ ಹೇಳಿದೆ. ‘
ಭಾರತದ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು, ಯಾವುದೇ ಜಾಗತಿಕ ಪ್ರಕ್ಷುಬ್ಧತೆಯಿಂದ ಉಂಟಾಗುವ ಬೇಡಿಕೆಯನ್ನು ಪೂರೈಸಲು 74 ದಿನಗಳಿಗಾಗುವಷ್ಟು ಇರುತ್ತದೆ ಎಂದು ಕಳೆದ ತಿಂಗಳು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಗೆ ತಿಳಿಸಿದ್ದರು. ಜಾಗತಿಕ ತೈಲದ ಐದನೇ ಒಂದು ಭಾಗದ ಸಾಗಣೆ ಕೇಂದ್ರವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ್ದರಿಂದ ಸಂಭವನೀಯ ಇಂಧನ ಬಿಕ್ಕಟ್ಟಿನ ಬಗ್ಗೆ ಕಳವಳ ಹೆಚ್ಚಾಗಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಮುಖ್ಯ ಕಮಾಂಡರ್ ಸಲಹೆಗಾರ ಇಬ್ರಾಹಿಂ ಜಬ್ಬಾರಿ, ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಘೋಷಿಸಿದ್ದಾರೆ. ಯಾರಾದರೂ ಇಲ್ಲಿಗೆ ಹೋಗಲು ಬಯಸಿದರೆ, ನಮ್ಮ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಸೇನೆಯ ಪಡೆಗಳು ಬೆಂಕಿಹಚ್ಚಿ ನಾಶಪಡಿಸುತ್ತವೆ. ಯಾರಾದರು ಈ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದರೆ ಎನ್ಕೌಂಟರ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
