ಉದಯವಾಹಿನಿ, ಬೆಂಗಳೂರು: ಕಂಟ್ರಾಕ್ಟರ್ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಯತ್ರಿ ನಗರದಲ್ಲಿ ನಡೆದಿದೆ. ಸವಿತಾ (53) ಮೃತ ಮಹಿಳೆ. ಸೋಮವಾರ ರಾತ್ರಿ 9 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಕಂಟ್ರಾಕ್ಟರ್ ರಮೇಶ್ ಬಾಬು ಕುಟುಂಬ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದರು. ಮನೆಯ ಮೊದಲ ಹಾಗೂ ಎರಡನೇ ಫ್ಲೋರ್ ಬಾಡಿಗೆಗೆ ಕೊಟ್ಟಿದ್ದರು. ಮೂರು ಮತ್ತು ನಾಲ್ಕನೇ ಫ್ಲೋರ್ನಲ್ಲಿ ರಮೇಶ್ ಬಾಬು ತಾಯಿ, ಹೆಂಡತಿ ಜೊತೆ ವಾಸವಾಗಿದ್ದರು. ಮೂರನೇ ಫ್ಲೋರ್ನ ಅಡುಗೆ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ರಮೇಶ್ ಬಾಬು ಪತ್ನಿ ಸವಿತಾ ಬೆಂಕಿಗೆ ಸಿಲುಕಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಮಯ ಪ್ರಜ್ಞೆಯಿಂದ ಮೂರು ಜೀವಗಳು ಬದುಕುಳಿದಿದೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಈ ವೇಳೆ ರಮೇಶ ಬಾಬು ಅವರ ತಾಯಿ ಸಣ್ಣಮ್ಮ ಹಾಗೂ ಮಗ ಮನೆಯಲ್ಲೇ ಸಿಲುಕಿಕೊಂಡಿದ್ದರು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಮೂವರನ್ನು ರಕ್ಷಣೆ ಮಾಡಿದೆ.
ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ ಹಾಗೂ ಸುಬ್ರಮಣ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
