ಉದಯವಾಹಿನಿ, ನವದೆಹಲಿ: ಅಮೆರಿಕ – ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ, ಇದಕ್ಕೆ ಪ್ರತಿಯಾಗಿ ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವುದು. ಪ್ರಾಣ ಹರಣ ಮತ್ತು ಆಸ್ತಿಪಾಸ್ತಿ ನಷ್ಟದ ಕುರಿತು ಭಾರತದ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿನ ಸಂಘರ್ಷ ತೀವ್ರ ಕಳವಳಕಾರಿಯಾಗಿದೆ. ಈ ಸಮಯದಲ್ಲಿ ಎಲ್ಲೆಡೆ ಇರುವ ಭಾರತೀಯರು ಸಂಯಮದಿಂದ ವರ್ತಿಸಬೇಕು. ಸಮಸ್ಯೆಗೆ ತುತ್ತಾಗುವುದನ್ನು ತಪ್ಪಿಸಬೇಕು. ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ದುರದೃಷ್ಟವಶಾತ್ ಪವಿತ್ರ ರಂಜಾನ್ ತಿಂಗಳಲ್ಲಿ ಈ ಉದ್ವಿಗ್ನತೆ ಉಂಟಾಗಿದೆ ಎಂದಿದೆ.
“ಇತ್ತೀಚಿನ ದಿನಗಳಲ್ಲಿ, ಸಂಘರ್ಷವು ಎರಡು ರಾಷ್ಟ್ರಗಳ ನಡುವೆ ಮಾತ್ರವಲ್ಲದೇ, ತೀವ್ರತೆಯು ಇತರ ರಾಷ್ಟ್ರಗಳಿಗೂ ಹರಡುವುದನ್ನು ಕಾಣುತ್ತಿದ್ದೇವೆ. ಸಾಮಾನ್ಯ ಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ಹಾನಿ ಮತ್ತು ಸಾವುಗಳು ಹೆಚ್ಚಿವೆ. ಭದ್ರತೆ ಮತ್ತು ಸ್ಥಿರತೆಯಲ್ಲಿ ನಿರ್ಣಾಯಕ ಪಣಗಳನ್ನು ಹೊಂದಿರುವ ಹತ್ತಿರದ ನೆರೆಯವರಾಗಿ, ಈ ಬೆಳವಣಿಗೆಗಳು ಹೆಚ್ಚಿನ ಆತಂಕವನ್ನು ಉಂಟುಮಾಡುತ್ತವೆ” ಎಂದು ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.
ಗಲ್ಫ್ ಪ್ರದೇಶದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಸುಮಾರು 1 ಕೋಟಿ ಭಾರತೀಯ ನಾಗರಿಕರ ಸುರಕ್ಷತೆಯು ಮೊದಲ ಆದ್ಯತೆಯಾಗಿದೆ. ಅವರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಯಾವುದೇ ಬೆಳವಣಿಗೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಮ್ಮ ವ್ಯಾಪಾರ ಮತ್ತು ಇಂಧನ ಪೂರೈಕೆಯು ಈ ಪ್ರದೇಶದಿಂದಲೇ ಹೆಚ್ಚಿದೆ. ಇಲ್ಲಾಗುವ ಯಾವುದೇ ಅಡಚಣೆಯು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ” ಎಂದು ಅದು ಹೇಳಿದೆ.
