
ಉದಯವಾಹಿನಿ, ಬೀದರ್ : ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಮೊಹರಂ. ಯಾವುದೇ ತಾರತಮ್ಯ ಇಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಸರ್ವಧರ್ಮೀಯರಲ್ಲಿ ಪರಸ್ಪರ ಪ್ರೀತಿ ಮತ್ತು ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ಮೊಹರಂನ 10 ನೇ ದಿನವನ್ನು ಅಶುರಾ ಎಂದು ಕರೆಯುತ್ತಾರೆ. ಇದು ಮುಸ್ಲಿಮರಿಗೆ ಮಹತ್ವದ ದಿನವಾಗಿದೆ. ಅನೇಕ ಸುನ್ನಿ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ನ ಹೊಸ ವರ್ಷದ ಆರಂಭವಾಗಿದೆ. ಶಾಂತಿಯ ಪ್ರತಿಬಿಂಬವಾಗಿದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಗ ಹುಸೇನ್ ಅವರ ಸಾವನ್ನು ನೆನಪಿಸುತ್ತದೆ. ಖಲೀಫಾ ಯಜಿದ್ನಿಂದ ಕ್ರಿಸ್ತಶಕ 680 ರಲ್ಲಿ ಆಶುರಾ ದಿನದಂದು ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಹುಸೇನ್ ಅವರನ್ನು ಕೊಲ್ಲಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಐದು ದಿನಗಳ ಕಾಲ ದೇವರ ಪಂಜಾಗಳನ್ನು ಕುಡಿಸುವ ಮೂಲಕ ಪುಜೆ ಪುನಸ್ಕಾರ ಮಾಡುತ್ತಾರೆ. ಆಲಾಯಿ ಕುಣಿತ, ಮೊಹರಂ ಪದಗಳನ್ನು ಹಾಡುವುದು, ದೇವರ ಕುಣಿತ, ಪೈತುರ್ ಹಾಕುವುದು, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ವಿವಿಧ ಆಚರಣೆ ಮಾಡುತ್ತಾರೆ. ಮೊಹರಂ ಕಡೆಯ ದಿನದ ರಾತ್ರಿ ಖತ್ತಲ ರಾತ್ರಿಯಾಗಿ ಆಚರಿಸುತ್ತಾರೆ ಇದರಲ್ಲಿ ಅನೇಕ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಪಿರಗಳನ್ನು ಹಿಡಿದು ಗ್ರಾಮದ ತುಂಬೆಲ್ಲಾ ತಿರುಗುತ್ತಾರೆ. ಅನೇಕ ಭಕ್ತರು ಐದು ದಿನಗಳ ಕಾಲ ವಿವಿಧ ವಿಶೇಷ ಪೂಜೆ ನೈವೇದ್ಯ ಮಾಡಿ ಅರ್ಪಿಸುತ್ತಾರೆ.
ಔರಾದ್ ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಶರಬತ್ (ಪಾನಕ)ವನ್ನು ವಿತರಿಸಿದರು. ಈ ಸಂದರ್ಭದಲ್ಲಿ ರಾಮದಾಸ್, ಅರ್ಜುನ್ ಶೆಟ್ಟಿ, ಗಣಪತಿ ವಾರಿಕ್, ಮುಸ್ತಫಾ, ಶಫಿಯೋದ್ದಿನ್, ಮುಕ್ತರ್, ಅನ್ವರ, ಸಿಕಂದರ, ಎಂ.ಡಿ ಫಯಾಜ್, ಯುನುಸ್ ಮುಲ್ಲಾ, ಬಿಲಾಲ್, ಶಿರಾಜ ಪಟೇಲ, ಏಜಾಸ್ ಸೇರಿದಂತೆ ಗ್ರಾಮಸ್ಥರು ಇದ್ದರು.
