ಉದಯವಾಹಿನಿ, ನವದೆಹಲಿ: ಮಾರ್ಚ್ 9 ಸೋಮವಾರ ಲೋಕಸಭೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮತ್ತು ಮತದಾನ ಸೋಮವಾರ ನಡೆಯಲಿದೆ.ಚರ್ಚೆ ಮತ್ತು ಮತದಾನ ನಡೆಯುವಾಗ ಓಂ ಬಿರ್ಲಾ ಅವರು ಸಭೆಯ ಅಧ್ಯಕ್ಷತೆ ವಹಿಸುವುದಿಲ್ಲ. ಬದಲಾಗಿ ಸದಸ್ಯರ ನಡುವೆ ಕುಳಿತುಕೊಳ್ಳಲಿದ್ದಾರೆ.
ಬಿರ್ಲಾ ಅವರ ವಿರುದ್ಧ ಪಕ್ಷಪಾತ ರೀತಿಯಲ್ಲಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ವಿರೋಧ ಪಕ್ಷಗಳು ನಿರ್ಣಯವನ್ನು ಮಂಡಿಸಿತ್ತು. ಈ ನಿರ್ಣಯದ ಚರ್ಚೆಯ ವೇಳೆ ಬಿರ್ಲಾ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಅಷ್ಟೆ ಅಲ್ಲದೇ ನಿರ್ಣಯದ ವಿರುದ್ಧ ಮತ ಚಲಾಯಿಸುವ ಹಕ್ಕನ್ನು ಸಹ ಹೊಂದಿರುತ್ತಾರೆ. ಈ ಹಿಂದೆ ಮಾತನಾಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ನಿಯಮದ ಪ್ರಕಾರ ಅಧಿವೇಶನ ಪುನರಾರಂಭಗೊಂಡ ಮೊದಲ ದಿನವೇ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗುವುದು. ಚರ್ಚೆಯ ನಂತರ ಮತದಾನ ನಡೆಯಲಿದೆ ಎಂದು ತಿಳಿಸಿದ್ದರು.
ಲೋಕಸಭೆಯ ಸ್ಫೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಸಲ್ಲಿಸುವುದು ಇದೇ ಮೊದಲೆನಲ್ಲ. ಈ ಹಿಂದೆ ಮೂರು ಬಾರಿ ಸ್ಪೀಕರ್ ಅವರನ್ನು ತೆಗೆದು ಹಾಕುವಂತೆ ವಿಪಕ್ಷಗಳು ಆಗ್ರಹಿಸಿದ್ದವು 1954 ರಲ್ಲಿ ಮೊದಲ ಸ್ಪೀಕರ್ ಜಿ.ವಿ. ಮಾವಲಂಕರ್, 1966 ರಲ್ಲಿ ಹುಕಮ್ ಸಿಂಗ್ ವಿರುದ್ಧ, 1987 ರಲ್ಲಿ ಬಲರಾಮ್ ಜಾಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು, ಮೂರು ಬಾರಿಯೂ ಈ ನಿರ್ಣಯಕ್ಕೆ ಸೋಲಾಗಿತ್ತು. ಜನವರಿ 28 ರಂದು ರಾಷ್ಟ್ರಪತಿಗಳ ಭಾಷಣದೊಂದಿಗೆ ಆರಂಭವಾಗಿದ್ದ ಬಜೆಟ್ ಅಧಿವೇಶನದ ಫೆಬ್ರವರಿ 12ಕ್ಕೆ ಕೊನೆಯಾಗಿತ್ತು. ಎರಡನೇ ಅವಧಿ ಮಾರ್ಚ್ 9 ರಂದು ಪುನರಾರಂಭಗೊಂಡು ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿದೆ.
