ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ಭವನಕ್ಕೆ ಕಡಿಮೆ ದರದಲ್ಲಿ ಸಿಎ ನಿವೇಶನಗಳನ್ನು ಕೊಟ್ಟಿರೋ ವಿಚಾರ ವಿಧಾನ ಪರಿಷತ್ನಲ್ಲಿ ಇಂದು ಸದ್ದು ಮಾಡಿತು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿಎಸ್.ಅರುಣ್ ಮಾತನಾಡಿ, ಕಾಂಗ್ರೆಸ್ ಭವನಕ್ಕೆ ಸರ್ಕಾರದ ಸಿಎ ಜಾಗ ಕೊಡಲಾಗಿದೆ. ಇದು ಹಗಲು ದರೋಡೆ. ದರ ಕಡಿಮೆ ಮಾಡಿ ಜಾಗ ಕೊಡಲಾಗಿದೆ. ರಾಜ್ಯದಲ್ಲಿ 40 ಕೋಟಿ ಮೌಲ್ಯದ ಜಾಗವನ್ನು 2 ಕೋಟಿ ಮೊತ್ತಕ್ಕೆ ಜಾಗ ಕೊಡಲಾಗಿದೆ. ಯಾವ ಆಧಾರದಲ್ಲಿ ಜಮೀನು ಕಡಿಮೆ ದರಕ್ಕೆ ಕೊಡಲಾಗಿದೆ. ಕೂಡಲೇ ಇದನ್ನ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಚಿವ ಬೈರತಿ ಸುರೇಶ್ ಉತ್ತರ ನೀಡಿ, ಕ್ಯಾಬಿನೆಟ್ನಲ್ಲಿ ನಿರ್ಧಾರ ಮಾಡಿ ಕಾಂಗ್ರೆಸ್ ಭವನಕ್ಕೆ ಜಾಗ ಕೊಡಲಾಗಿದೆ. ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆ ದರಕ್ಕೆ ನೀಡಲಾಗಿದೆ. ನಿಯಮದ ಪ್ರಕಾರ ಜಮೀನು ಕೊಡಲಾಗಿದೆ. ಕಂದಾಯ ಇಲಾಖೆಯಿಂದ ಯಾವುದೇ ವಿರೋಧ ಬಂದಿಲ್ಲ. ಜಮೀನು ಮಂಜೂರಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ. ಕಾಂಗ್ರೆಸ್ ಭವನಕ್ಕೆ ಕೊಟ್ಟಿರೋ ಜಾಗ ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದರು.
