ಉದಯವಾಹಿನಿ, ರಾಜಮಹೇಂದ್ರವರಂ (ಆಂಧ್ರಪ್ರದೇಶ): ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ ಶಂಕಿತ ಕಲಬೆರಕೆ ಹಾಲು ಸೇವನೆ ದುರಂತದಲ್ಲಿ ಶುಕ್ರವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ 16ಕ್ಕೆ ಏರಿದೆ. ತೀವ್ರ ವೈದ್ಯಕೀಯ ಚಿಕಿತ್ಸೆಯ ಹೊರತಾಗಿಯೂ ಹಲವರ ಸ್ಥಿತಿ ಗಂಭೀರವಾಗಿದ್ದು, ಆಂಧ್ರಪ್ರದೇಶದಾದ್ಯಂತ ಕಳವಳ ವ್ಯಕ್ತವಾಗಿದೆ. ಕಳೆದ ತಿಂಗಳು 16 ರಂದು ಮೊದಲ ಘಟನೆ ನಡೆದಿತ್ತು.
ಕಲುಷಿತ ಹಾಲು ಸೇವಿಸಿದ ಇತರರ ಜೀವ ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಸ್ತುತ, ಐದು ತಿಂಗಳ ಶಿಶು ಮತ್ತು ಎರಡು ವರ್ಷದ ಮಗು ಸೇರಿದಂತೆ ಐದು ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ರೋಗಿಗಳು ತುರ್ತು ವಾರ್ಡ್ಗಳಲ್ಲಿದ್ದಾರೆ. ವಿಷಕಾರಿ ವಸ್ತುವಿನಿಂದ ಉಂಟಾದ ತೀವ್ರ ಅಂಗಾಂಗ ಹಾನಿಯಿಂದಾಗಿ ವೆಂಟಿಲೇಟರ್ ಬೆಂಬಲದಲ್ಲಿ ಅವರನ್ನು ಇರಿಸಲಾಗಿದೆ. ಡಯಾಲಿಸಿಸ್ಗೂ ಒಳಗಾಗುತ್ತಿದ್ದಾರೆ. ವಿಷಕಾರಿ ರಾಸಾಯನಿಕವು ಈಗಾಗಲೇ ಪ್ರಮುಖ ಅಂಗಗಳಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದೆ. ಇದರಿಂದಾಗಿ ಚಿಕಿತ್ಸೆ ತುಂಬಾ ಕಷ್ಟಕರವಾಗಿದೆ. ನಮ್ಮ ಚಿಕಿತ್ಸೆಯ ಹೊರತಾಗಿಯೂ ಮನೋಹರ್ (6) ಮತ್ತು ಜೈಕೃತ್ ರಾಜ್ (3) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಅವರ ಸಾವು ಸ್ಥಳೀಯ ಸಮುದಾಯವನ್ನು ದುಃಖಕ್ಕೆ ತಳ್ಳಿದೆ ಎಂದು ವೈದ್ಯರು ಬೇಸರ ಹೊರಹಾಕಿದ್ದಾರೆ.
ಈ ಹಾಲನ್ನು ಅತ್ಯಂತ ವಿಷಕಾರಿ ರಾಸಾಯನಿಕವಾದ ಎಥಿಲೀನ್ ಗ್ಲೈಕಾಲ್ನಿಂದ ಪೂರೈಸಿರುವ ಮಾಹಿತಿ ಲಭ್ಯವಾಗಿದೆ. ಕೊರುಕೊಂಡ ಮಂಡಲದ ನರಸಪುರಂನ ಗಣೇಶೇಶ್ವರ ರಾವ್ ಎಂಬ ಮಾರಾಟಗಾರರಿಂದ ಈ ಹಾಲು ಸರಬರಾಜು ಮಾಡಲ್ಪಟ್ಟಿದೆ ಎಂಬುವುದು ಗೊತ್ತಾಗಿದೆ. ಒಂದೇ ಕುಟುಂಬದ ನಾಲ್ವರು ಸದಸ್ಯರು ತೀವ್ರ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಪರೀಕ್ಷೆಗಳಲ್ಲಿ ಪೀಡಿತ ವ್ಯಕ್ತಿಗಳಲ್ಲಿ ರಕ್ತದ ಯೂರಿಯಾ ಮತ್ತು ಸೀರಮ್ ಕ್ರಿಯೇಟಿನೈನ್ ಮಟ್ಟ ಹೆಚ್ಚಾಗಿದ್ದು, ವಿಷಕಾರಿ ಅಂಶ ಅಧಿಕವಾಗಿರುವುದನ್ನು ಗಮನಿಸಲಾಗಿದೆ. ಇದು ಗಂಭೀರ ಮೂತ್ರಪಿಂಡದ ಹಾನಿಯನ್ನು ಸೂಚಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಸಿದ್ಧ ಮೂತ್ರಪಿಂಡಶಾಸ್ತ್ರಜ್ಞ ಡಾ. ರವಿರಾಜ್ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೈದರಾಬಾದ್ನ ತಜ್ಞರು ಸಹ ಪ್ರಕರಣಗಳನ್ನು ಪರಿಶೀಲಿಸಲು ಮತ್ತು ಚಿಕಿತ್ಸಾ ಕ್ರಮಗಳನ್ನು ಸೂಚಿಸಲು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ.
ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು 65 ಹಾಲು ಮಾರಾಟಗಾರರು ರಾಜಮಹೇಂದ್ರವರಂ ನಗರಕ್ಕೆ ಹಾಲು ಪೂರೈಸುತ್ತಾರೆ. ಕಲಬೆರಕೆ ಹಗರಣವು ಹಾಲು ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಆಹಾರ ಸುರಕ್ಷತಾ ತಪಾಸಣೆಗಳನ್ನು ಕೈಗೊಳ್ಳುವುದು ಅಗತ್ಯ. ಕಲಬೆರಕೆ ಹಾಲನ್ನು ಗುರುತಿಸುವ ಮತ್ತು ಅನುಮಾನಾಸ್ಪದ ಉತ್ಪನ್ನಗಳನ್ನು ವರದಿ ಮಾಡುವ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಸಹ ಹಮ್ಮಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
