ಉದಯವಾಹಿನಿ, ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್  ಅಭ್ಯರ್ಥಿ ಉಮೇಶ್ ಮೇಟಿ ಅವರಿಂದು (ಮಾ.23) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪುರ, ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದು, ಬಾಗಲಕೋಟೆ ಎಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಉಮೇಶ್ ಮೇಟಿ ಅವರು ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ರಾಘವೇಂದ್ರ ರಾಯರ ಮಠಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಆನಂತರ ದಿವಂಗತ ತಂದೆ ಹೆಚ್.ವೈ ಮೇಟಿ ಅವರ ಸಮಾಧಿಗೆ ತೆರಳಿ, ಆಶೀರ್ವಾದ ಪಡೆದಕೊಂಡರು.
ನಾಮಪತ್ರ ಸಲ್ಲಿಕೆ ಬಳಿಕ ಸಚಿವ ಆರ್.ಬಿ ತಿಮ್ಮಾಪುರ್ ಮಾತನಾಡಿ, ಬಾಗಲಕೋಟೆ ನಾಡಿನಲ್ಲಿ ಬಸವಣ್ಣನವರ ಹಿಂದುತ್ವ, ರಾಮಕೃಷ್ಣ ಪರಮಹಂಸರ ಹಿಂದುತ್ವ, ವಿವೇಕಾನಂದರ ಹಿಂದುತ್ವವಿದೆ. ಉಮೇಶ ಮೇಟಿ ಕೂಡ ಹಿಂದೂ ಹೀಗಾಗಿ ಜನ ನಮ್ಮ ಹಿಂದೂ ಅಭ್ಯರ್ಥಿಗೆ ಮತ ಹಾಕ್ತಾರೆ. ಬಾಗಲಕೋಟೆ ಜನ ಪ್ರಬುದ್ಧರು ಆಡಳಿತಾರೂಢ ಸರ್ಕಾರದ ಪರವಾಗಿ ನಿಲ್ಲುತ್ತಾರೆ. ಇನ್ನು ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಸರ್ಕಾರ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ನೀಡಿದೆ. ಬಸವತತ್ವವನ್ನ ಆಚರಣೆ ಮಾಡಿದ್ದೇವೆ. ಸರ್ವಜನಾಂಗದ ಶಾಂತಿಯ ತೋಟ ಎನ್ನುವ ನೀತಿ ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!