ಉದಯವಾಹಿನಿ, ಭುವನೇಶ್ವರ (ಒಡಿಶಾ): ಸಾಕು ನಾಯಿಗಳು ಕುಟುಂಬ ಸದಸ್ಯನಿಗೂ ಹೆಚ್ಚಾಗಿ ನಿಷ್ಠೆಯಿಂದಿರುವ, ಮಾಲೀಕನಿಗಾಗಿ ಜೀವ ತ್ಯಾಗಕ್ಕೆ ಸಿದ್ದವಾಗುವ ಪ್ರಾಣಿ. ಅನೇಕ ಬಾರಿ, ಮಾತು ಬಾರದ ಮೂಕ ಪ್ರಾಣಿಗಳು ತಾವು ಅನುಭವಿಸುವ ನೋವು ವ್ಯಕ್ತಪಡಿಸುವಲ್ಲಿ ಆಗುವ ಸೋಲು, ಮಾಲೀಕರು ಅವುಗಳ ವಿಚಾರದಲ್ಲಿ ತೋರುವ ಸಣ್ಣ ನಿರ್ಲಕ್ಷ್ಯವು ಹೇಗೆ ಅದನ್ನು ನಮ್ಮಿಂದ ದೂರವಾಗಿಸುತ್ತದೆ ಎಂಬುದಕ್ಕೆ ಭುವನೇಶ್ವರದಲ್ಲಿ ನಡೆದ ಘಟನೆಯೇ ಸಾಕ್ಷಿ. ಫೋನಿ ಎಂಬ ಡ್ಯಾಷ್ ಹಂಡ್ ನಾಯಿಯನ್ನು ಕುಟುಂಬವೊಂದು ಮನೆಯ ಸದಸ್ಯನಂತೆ ಆರು ವರ್ಷಗಳ ಕಾಲ ಪ್ರೀತಿಯಿಂದ ಸಲುಹಿದ್ದರು. ಮಾಲೀಕರ ಪ್ರೀತಿಯ ನಿಷ್ಠೆಗೆ ಅದು ತೋರಿದ ಬೆಲೆ ಬಲು ದುಬಾರಿಯಾಗಿದೆ ಅಂತಿದ್ದಾರೆ ಸ್ನೇಕ್ ಹೆಲ್ಪ್ಲೈನ್ನ ಪ್ರಧಾನ ಕಾರ್ಯದರ್ಶಿ ಸುಭೇಂದು ಮಲ್ಲಿಕ್. ಇವರು ನೀಡಿರುವ ಮಾಹಿತಿಯ ಪ್ರಕಾರ, ಭುವನೇಶ್ವರದ ಚಿಲಿ ಪೋಖಾರಿ ಪ್ರದೇಶದಲ್ಲಿ ಜುನಾ ಜೆನಾ ಅವರ ಸಾಕು ನಾಯಿ ಒಂದು ದಿನ ಜೋರಾಗಿ ಬೊಗಳಲು ಆರಂಭಿಸಿತ್ತು. ಈ ವೇಳೆ ಗಾಬರಿಗೊಂಡ ಮನೆ ಮಾಲಕಿ ಬಂದು ನೋಡಿದಾಗ, ಈ ಶ್ವಾನ ಹಾವನ್ನು ಮನೆಯೊಳಗೆ ಬರದಂತೆ ತಡೆಯಲು ಜೋರಾಗಿ ಬೊಗಳಲಾರಂಭಿಸಿದೆ. ಇದನ್ನು ಕಂಡು ಅವರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ.
ಹಾವು ಮತ್ತು ನಾಯಿಗಳ ನಡುವೆ ಕಾಳಗ: ಹಾವಿನ ಸುತ್ತ ಸುತ್ತುವರಿದ ಶ್ವಾನಗಳನ್ನು ತಕ್ಷಣಕ್ಕೆ ಓಡಿಸುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಮೂರು ನಾಯಿಗಳು ಸ್ಥಳ ಬಿಟ್ಟು ಹೋದರೆ, 6 ವರ್ಷದ ಡ್ಯಾಷ್ಹಂಡ್ ನಾಯಿ ಫೋನಿ ಮಾತ್ರ ಅಲ್ಲಿಂದ ಕದಲಿಲ್ಲ. ಹಾವು ಮನೆಯೊಳಗೆ ಬರದಂತೆ ಹಾವಿನೊಂದಿಗೆ ಕಾಳಗ ಮುಂದುವರೆಸಿದೆ. ಈ ವೇಳೆ ಹಾವು ಫೋನಿ ನಾಯಿಯನ್ನು ಕಚ್ಚಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಯುವಕರು ನಾಯಿಯನ್ನು ಹಾವಿನ ಕಡಿತದಿಂದ ರಕ್ಷಣೆ ಮಾಡಿದ್ದಾರೆ. ಈ ವೇಳೆ, ಹಾವು ಕಡಿತದಿಂದ ನಾಯಿ ಸ್ಥಿತಿ ಗಂಭೀರವಾಗಿದೆ. ತಕ್ಷಣಕ್ಕೆ ಅವರು ಶಾಹಿದ್ನಗರ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಆದಾಗಲೇ ನಾಯಿ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.ಹಾವು ಕಡಿತದ ಬಳಿಕ ಶ್ವಾನದ ಮೇಲೆ ನೀರು ಸುರಿದ್ದಿದ್ದೇ ತಪ್ಪಾಯಿತೇ?: ಈ ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಹೆಲ್ಪ್ ಲೈನ್ ತಂಡವು ಸ್ಥಳಕ್ಕೆ ತಲುಪಿ ಘಟನೆಯ ಬಗ್ಗೆ ವಿಚಾರಿಸಿದೆ. ಘಟನೆ ವಿವರಿಸಿದ್ದು, ಹಾವು ಮತ್ತು ನಾಯಿ ನಡುವೆ ಕಾಳಗ ಕಂಡು ತಕ್ಷಣಕ್ಕೆ ಮೂರು ನಾಯಿಗಳನ್ನು ಮನೆಗೆ ಕಳುಹಿಸಿದೆ. ಫೋನಿ ಮಾತ್ರ ಹಾವು ಕಡಿತಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದು, ಅದನ್ನು ರಕ್ಷಿಸಲು ನೀರು ಸುರಿದಿದ್ದಾಗಿ ತಿಳಿಸಿದರು.
