ಉದಯವಾಹಿನಿ, ನವದೆಹಲಿ: ಕೇಂದ್ರ ಸರ್ಕಾರವು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಿಂದ ಶೌರ್ಯ ಪ್ರಶಸ್ತಿ ಪಡೆದವರಿಗೆ ಜೀವಿತಾವಧಿಯ ರೈಲು ಪ್ರಯಾಣವನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ಅವರ ಕುಟುಂಬದ ಕೆಲವು ವರ್ಗಗಳಿಗೂ ಈ ಸೌಲಭ್ಯ ವಿಸ್ತರಣೆಯಾಗಲಿದೆ.
ಶೌರ್ಯ ಪ್ರಶಸ್ತಿ ಪಡೆದ ಸಶಸ್ತ್ರ ಪಡೆಗಳ ಎಲ್ಲಾ ಸಿಬ್ಬಂದಿ, ಪ್ರಶಸ್ತಿ ಪಡೆದವರು ಮೃತಪಟ್ಟಿದ್ದರೆ ಅವರ ಹೆಂಡತಿ ಅಥವಾ ಗಂಡ ಹಾಗೂ ಅವರು ಮರುಮದುವೆಯಾಗುವವರೆಗೂ ಪ್ರಯೋಜನ ಪಡೆಯಬಹುದು. ಒಂದು ವೇಳೆ ಮೃತರಾದ ಬಳಿಕ ಪ್ರಶಸ್ತಿ ಘೋಷಣೆಯಾಗಿದ್ದರೆ ಅಥವಾ ಅವರು ಅವಿವಾಹಿತರಾಗಿದ್ದಲ್ಲಿ ಪೋಷಕರು ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.
ಈ ಸೌಲಭ್ಯದ ಅಡಿಯಲ್ಲಿ, ಫಲಾನುಭವಿಗಳು ತಮ್ಮ ಓರ್ವ ಸಹಚರನೊಂದಿಗೆ ಭಾರತೀಯ ರೈಲ್ವೆಯಲ್ಲಿ ಉಚಿತ ಪ್ರಯಾಣ ಮಾಡಬಹುದು. ಈ ಸೌಲಭ್ಯ ಪ್ರಥಮ ದರ್ಜೆ, ಎರಡನೇ ಎಸಿ, ಎಸಿ ಚೇರ್ ಕಾರ್ ವರ್ಗಗಳಿಗೆ ಅನ್ವಯಿಸುತ್ತದೆ.ದೇಶಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಗೌರವಾನ್ವಿತ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಗುರಿಯೊಂದಿಗೆ ಈ ಸೌಲಭ್ಯ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆ ತಕ್ಷಣವೇ ಜಾರಿಗೆ ಬರಲಿದ್ದು, ಸಾವಿರಾರು ಮಿಲಿಟರಿ ಕುಟುಂಬಗಳು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದೆ
