ಉದಯವಾಹಿನಿ, ಭೋಪಾಲ್​ (ಮಧ್ಯಪ್ರದೇಶ): ಏನೂ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಎಷ್ಟೇ ಸಮಜಾಯಿಸಿ ನೀಡಿದರೂ, ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶದಲ್ಲಿ ಇಂಧನ ಕೊರತೆ ಉಂಟಾಗಿರುವುದಂತೂ ಸತ್ಯ. ಗ್ಯಾಸ್​ ಇಲ್ಲದೆ ಹೋಟೆಲ್​ಗಳು, ಪೆಟ್ರೋಲ್, ಡೀಸೆಲ್​ ಲಭ್ಯವಿಲ್ಲದೆ ಬಂಕ್​ಗಳು ಬಾಗಿಲು ಎಳೆದುಕೊಂಡಿವೆ. ಪೆಟ್ರೋಲ್​ ಪಂಪ್​ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ಸಿಗದ ಕಾರಣ ವಾಹನ ಬಳಕೆಯನ್ನು ನಿಲ್ಲಿಸುವಂತಾಗಿದೆ. ಹೀಗೆ, ಪೆಟ್ರೋಲ್​ ಲಭ್ಯವಿಲ್ಲದ ಕಾರಣ ಬ್ಯಾಂಕ್​ ಉದ್ಯೋಗಿಯೊಬ್ಬ ಕುದುರೆ ಏರಿ ಕೆಲಸಕ್ಕೆ ಹಾಜರಾಗಿದ್ದಾನೆ.

ಬೈಕ್​ ಬಿಟ್ಟು ಕುದುರೆ ಏರಿದ: ಖಾಸಗಿ ಬ್ಯಾಂಕಿನ ಕಲೆಕ್ಷನ್​ ಏಜೆಂಟ್ ಗೋಪಾಲ್ ಠಾಕೂರ್ ಎಂಬವರು ಬೈಕ್‌ ಬಿಟ್ಟು ತಮ್ಮಲ್ಲಿದ್ದ ಕುದುರೆಯನ್ನು ಏರಿ ಆಫೀಸ್​ಗೆ ಬಂದಿದ್ದಾರೆ. ಟಿಪ್​ಟಾಪ್​ ಆಗಿ ರೆಡಿಯಾಗಿದ್ದ ಗೋಪಾಲ್​ ಅವರು ಕುದುರೆ ಮೇಲೆ ಸವಾರಿ ಮಾಡಿಕೊಂಡು ಹೋಗುತ್ತಿರುವುದನ್ನ ಜನರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ದೇವಾಸ್​ ಜಿಲ್ಲೆಯ ರಾಧಾಗಂಜ್ ನಿವಾಸಿಯಾಗಿರುವ ಠಾಕೂರ್ ಅವರು ಜವಾಹರ್ ನಗರ ಶಾಖೆಯ ತಮ್ಮ ಕಚೇರಿಗೆ ಬೈಕ್​ನಲ್ಲಿ ಬರುತ್ತಾರೆ. ಪೆಟ್ರೋಲ್​ ಹಾಸಿಕೊಳ್ಳಲು ಉದ್ದನೆಯ ಸಾಲಿನಲ್ಲಿ ನಿಲ್ಲಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ಆಫೀಸ್​​ಗೆ ಹೋಗಲು ಸಾಧ್ಯವಿಲ್ಲ ಎಂದರಿತ ಅವರು, ಖರ್ಚು ಮತ್ತು ಟ್ರಾಫಿಕ್​ ಸಮಸ್ಯೆ ಇಲ್ಲದ ಕುದುರೆ ಸವಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ತಮ್ಮ ಮನೆಯಿಂದ ಮೂರು ಕಿಲೋ ಮೀಟರ್​ ದೂರ ಕುದುರೆಯಲ್ಲಿ ಬಂದಿದ್ದಾರೆ. ದಾರಿ ನಡುವೆ ಇದನ್ನು ಕಂಡ ಜನರು ಅಚ್ಚರಿಗೊಂಡಿದ್ದಾರೆ. ಇನ್ನು ಕೆಲವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆಫೀಸ್​ ತಲುಪಿದ ಬಳಿಕ ಸಹೋದ್ಯೋಗಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿ ನಗೆ ಬೀರಿದ್ದಾರೆ.

Leave a Reply

Your email address will not be published. Required fields are marked *

error: Content is protected !!