ಉದಯವಾಹಿನಿ,  ಬೆಂಗಳೂರು: ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ಓಪನ್ ಮಾಡಿ, ಹುಚ್ಚಾಟ ಮೆರೆಯಲು ಮುಂದಾಗಿದ್ದ ಪ್ರಯಾಣಿಕನಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ ಪೊಲೀಸರ ವಿರುದ್ಧ ಇದೀಗ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ಮೂಲದ ಉತ್ಕರ್ಷ ಎಂಬಾತ ಜೈಪುರದಿಂದ ಬೆಂಗಳೂರಿಗೆ ಪ್ರಯಾಣಿಸುವ ವೇಳೆ ವಿಮಾನದ ತುರ್ತು ನಿರ್ಗಮನ ಬಾಗಿಲು ತೆಗೆಯಲು ಯತ್ನಿಸಿ ಹುಚ್ಚಾಟ ಮೆರೆದಿದ್ದ ಎನ್ನಲಾಗಿದೆ. ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಲೈನ್ ಸಿಬ್ಬಂದಿ ದೂರು ನೀಡಿದ್ದರು. ದೂರಿನನ್ವಯ ಆತನನ್ನ ವಶಕ್ಕೆ ಪಡೆದು, ಎನ್‌ಸಿಆರ್ ಪ್ರಕರಣ ದಾಖಲಿಸಿದ್ದರು. ಬಳಿಕ ಬುದ್ಧಿ ಮಾತು ಹೇಳಿ ಬಿಡುಗಡೆ ಮಾಡಿದ್ದರು.  ಠಾಣೆಯಿಂದ ಹೊರಬಂದ ಮೇಲೆ ಉತ್ಕರ್ಷ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ತನ್ನನ್ನು ನಾಲ್ಕು ಗಂಟೆ ಠಾಣೆಯ ಸೆಲ್‌ನಲ್ಲಿ ಕೂರಿಸಿ ಕಿರುಕುಳ ನೀಡಿದ್ದಾರೆ ಎಂದು ಬರೆದಿದ್ದ. ಜೊತೆಗೆ ಕೂಡಲೇ ಬೆಂಗಳೂರು ಪೊಲೀಸರನ್ನು ಮಹಾರಾಷ್ಟ್ರ ಪೊಲೀಸರು ಅರೆಸ್ಟ್ ಮಾಡುವಂತೆ ಬರೆದುಕೊಂಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಈತನ ಬರಹವನ್ನು ಕಂಡಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಪುನಃ ಈತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!