ಉದಯವಾಹಿನಿ, ನವದೆಹಲಿ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಗಳಿಗೆ ನೀಡಲಾದ ಸರ್ಕಾರಿ ಒಪ್ಪಂದಗಳ ಕುರಿತು ಎರಡು ವಾರಗಳಲ್ಲಿ ಪ್ರಾಥಮಿಕ ತನಿಖೆ ಪ್ರಾರಂಭಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಆದೇಶಿಸಿದೆ. ಜನವರಿ 1, 2015 ರಿಂದ ಡಿಸೆಂಬರ್ 31, 2025 ರ ವರೆಗೆ ರಾಜ್ಯದಲ್ಲಿ ಕಾರ್ಯಗತಗೊಳಿಸಲಾದ ಎಲ್ಲಾ ಸಾರ್ವಜನಿಕ ಕಾಮಗಾರಿಗಳು, ಒಪ್ಪಂದಗಳು ಮತ್ತು ಕೆಲಸದ ಆದೇಶಗಳ ಪರಿಶೀಲನೆಯನ್ನ ತನಿಖೆಯು ಒಳಗೊಂಡಿರುತ್ತದೆ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠ ಹೇಳಿದೆ. ಈ ವಿಷಯದಲ್ಲಿ 16 ವಾರಗಳಲ್ಲಿ ಸುಪ್ರೀಂ ಕೋರ್ಟ್ಗೆ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಸಿಬಿಐಗೆ ನಿರ್ದೇಶಿಸಿದೆ. ಫೆಬ್ರವರಿ 17 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
10 ವರ್ಷಗಳಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬಕ್ಕೆ ಸಂಬಂಧಿಸಿದ ನಾಲ್ಕು ಕಂಪನಿಗಳಿಗೆ ಸುಮಾರು 1,270 ಕೋಟಿ ರೂ. ಮೌಲ್ಯದ ಸರ್ಕಾರಿ ಟೆಂಡರ್ಗಳನ್ನ ನೀಡಲಾಗಿದೆ ಎಂದು ಹೇಳಿಕೊಂಡಿವೆ. ಅರ್ಜಿದಾರರಾದ ಎನ್ಜಿಒಗಳಾದ ಸೇವ್ ಮಾನ್ ರೀಜನ್ ಫೆಡರೇಶನ್ ಮತ್ತು ವಾಲಂಟರಿ ಅರುಣಾಚಲ ಸೇನೆಯನ್ನು ಪ್ರತಿನಿಧಿಸುವ ವಕೀಲ ಪ್ರಶಾಂತ್ ಭೂಷಣ್, ಮುಖ್ಯಮಂತ್ರಿಯವರ ಕುಟುಂಬಕ್ಕೆ ಸಂಬಂಧಿಸಿದ ಟೆಂಡರ್ಗಳಲ್ಲಿ ಸ್ಪಷ್ಟ ಹಿತಾಸಕ್ತಿ ಕಂಡುಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣದಲ್ಲಿ ಸಿಎಂ ಪೆಮಾ ಖಂಡು, ಅವರ ತಂದೆ ದೋರ್ಜಿ ಖಂಡು ಅವರ ಎರಡನೇ ಪತ್ನಿ ರಿಂಚಿನ್ ಡ್ರಿಮಾ ಮತ್ತು ಸೋದರಳಿಯ ತ್ಸೆರಿಂಗ್ ತಾಶಿ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ದೋರ್ಜಿ ಖಂಡು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ಏಪ್ರಿಲ್ 2011 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ರಿಂಚಿನ್ ಡ್ರಿಮಾ ಅವರ ಕಂಪನಿ ಬ್ರಾಂಡ್ ಈಗಲ್ಸ್ ಹಲವಾರು ಸರ್ಕಾರಿ ಟೆಂಡರ್ಗಳನ್ನು ಪಡೆದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
