ಉದಯವಾಹಿನಿ, ಕಡಪ(ಆಂಧ್ರಪ್ರದೇಶ): ಅರೆ ಕ್ಷಣದ ಕೋಪ, 100 ಕಿಲೋ ಮೀಟರ್ಗೂ ಅಧಿಕ ಅಪಾಯಕಾರಿ ಸೈಕಲ್ ಸವಾರಿ, ಜಿಲ್ಲೆ ಮತ್ತು ರಾಜ್ಯಗಳ ಗಡಿ ದಾಟಿ ಪ್ರಯಾಣ.. ಇದು 9ನೇ ತರಗತಿ ವಿದ್ಯಾರ್ಥಿಯ ಆಕ್ರೋಶದ ಫಲಿತಾಂಶ.
ಹೌದು. ಕಡಪ ಜಿಲ್ಲೆಯ ಪ್ರೊದ್ದುಟೂರು ಗ್ರಾಮದ ಬಾಲಕ ಮನೆಯಲ್ಲಿ ತಂದೆ ಬೈದರೆಂಬ ಕಾರಣಕ್ಕಾಗಿ ಸೈಕಲ್ ಹತ್ತಿ 100 ಕಿಲೋ ಮೀಟರ್ ದೂರ ಪ್ರಯಾಣ ಮಾಡಿದ್ದಾನೆ. ಇತ್ತ, ಮಗ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ. ಪೊಲೀಸರು ಶೋಧ ನಡೆಸಿದಾಗ ಆತ ಕೊನೆಗೆ ಕಂಡು ಬಂದಿದ್ದು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ.
ಆಂಧ್ರ TO ಕರ್ನಾಟಕ ಪ್ರಯಾಣ: ಮನೆಯಲ್ಲಿ ತನ್ನ ಸಹೋದರನೊಂದಿಗೆ ಜಗಳವಾಡುತ್ತಿದ್ದಾಗ ತಂದೆ ಬೈದಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವಿದ್ಯಾರ್ಥಿಯು ಮರುದಿನ ಶಾಲೆ ಮುಗಿಸಿಕೊಂಡು ಸಂಜೆ ಅಲ್ಲಿಂದಲೇ ಗೊತ್ತು ಗುರಿಯಿಲ್ಲದೇ ಸೈಕಲ್ ತುಳಿದುಕೊಂಡು ಪ್ರಯಾಣಿಸಿದ್ದಾನೆ. ಇಡೀ ರಾತ್ರಿ ಆತ ಸೈಕಲ್ ಮೂಲಕ ರಾಜುಪಾಲಂ ಮತ್ತು ಚಗಲಮರ್ರಿ ಗ್ರಾಮಗಳನ್ನು ದಾಟಿ 100 ಕಿ.ಮೀ.ಗೂ ದೂರದ ನಂದ್ಯಾಲಕ್ಕೆ ಮಾರನೇ ದಿನ ಬೆಳಗ್ಗೆ ಬಂದು ತಲುಪಿದ್ದಾನೆ. ತನ್ನ ಬಳಿಕ ಹಣವಿಲ್ಲದ ಕಾರಣ, ಹತ್ತಿ ಬಂದಿದ್ದ ಸೈಕಲ್ ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಗುಜರಿ ಅಂಗಡಿ ಮಾಲೀಕ ವಿದ್ಯಾರ್ಥಿಯ ಬಗ್ಗೆ ವಿಚಾರಿಸಿದ್ದಾನೆ.
ಸೈಕಲ್ ಖರೀದಿಸಲು ಆತ ಹಿಂದೇಟು ಹಾಕಿದಾಗ, ಅಲ್ಲಿಯೇ ನೀರು ಕುಡಿದು ವಿದ್ಯಾರ್ಥಿ ಮುಂದಿನ ಪ್ರಯಾಣ ಬೆಳೆಸಿದ್ದಾನೆ. ಬಳಿಕ, ಆತ ನಂದ್ಯಾಲದ ರೈಲ್ವೆ ನಿಲ್ದಾಣದ ಬಳಿ ಸೈಕಲ್ ಬಿಟ್ಟು ಕರ್ನಾಟಕದ ಗಡಿ ಜಿಲ್ಲೆಯಾದ ರಾಯಚೂರು ಕಡೆಗೆ ಹೊರಟಿದ್ದ ರೈಲು ಹತ್ತಿ ಬಂದಿದ್ದಾನೆ.
ಪೋಷಕರಿಂದ ನಾಪತ್ತೆ ದೂರು: ಇತ್ತ, ಬಾಲಕನ ಪೋಷಕರು ಮಗ ಮನೆಗೆ ಬಂದಿಲ್ಲ ಎಂದು ಕಂಡ ಕಂಡೆಲ್ಲೆಲ್ಲಾ ಹುಡುಕಾಡಿದ್ದಾರೆ. ಕೊನೆಗೆ ಸಿಗದಿದ್ದಾಗ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ವಿದ್ಯಾರ್ಥಿಯ ಬಳಿ ಮೊಬೈಲ್ ಫೋನ್ ಅಥವಾ ಇನ್ನಿತರ ಯಾವುದೇ ಡಿಜಿಟಲ್ ಸಾಧನ ಇಲ್ಲದ ಕಾರಣ ಪೊಲೀಸರು ಆತನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಹೋಟೆಲ್, ಲಾಡ್ಜ್, ಮತ್ತಿತರ ಸ್ಥಳಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ ವಿದ್ಯಾರ್ಥಿ ನಂದ್ಯಾಲ ಕಡೆಗೆ ಹೊರಟಿದ್ದು ಗೊತ್ತಾಗಿದೆ. ಬಾಲಕನ ಶೋಧಕ್ಕಾಗಿ ತಂಡ ರಚಿಸಿಕೊಂಡ ಪೊಲೀಸರು, ಮಾರ್ಗಗಳಲ್ಲಿ ಸಿಸಿಟಿವಿ ಪರಿಶೀಲಿಸುತ್ತಾ ಸಾಗಿದ್ದಾರೆ. ವಿದ್ಯಾರ್ಥಿಯು ಶಾಲಾ ಬ್ಯಾಗ್ ಮತ್ತು ಸೈಕಲ್ ಜೊತೆ ಹೊರಟಿದ್ದು ಆ ಸಿಸಿಟಿವಿಗಳಲ್ಲಿ ಸೆರೆಯಾಗಿದೆ.
