
ಉದಯವಾಹಿನಿ, ರಾಂಚಿ(ಜಾರ್ಖಂಡ್): ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಹಿಡಿದ ತಂದೆ ಕೋಲಿನಿಂದ ಮನಬಂದಂತೆ ಥಳಿಸಿ ಕೊಂದ ಘಟನೆ ರಾಂಚಿಯಲ್ಲಿ ನಡೆದಿದೆ. ಆರೋಪಿಯನ್ನು ಭಾನುವಾರ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಕಿದಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಹರತು ಗ್ರಾಮದಲ್ಲಿ ಮಾರ್ಚ್ 21ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 22ರಂದು ಮೃತಪಟ್ಟ ವ್ಯಕ್ತಿಯ ಪುತ್ರ ಎಫ್ಐಆರ್ ದಾಖಲಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ನಾವು ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ. ಆತ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ವ್ಯಕ್ತಿ ತನ್ನ 14 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ಮಗಳು ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ತಂದೆಗೆ ವಿವರಿಸಿದ್ದಳು. ಇದರಿಂದ ಕೋಪಗೊಂಡ ತಂದೆ, ಆರೋಪಿಯನ್ನು ಕೋಲಿನಿಂದ ಹೊಡೆದು ಕೊಂದಿದ್ದಾನೆ” ಎಂದು ಸಬ್ ಇನ್ಸ್ಪೆಕ್ಟರ್ ಬರುಣ್ ಕುಮಾರ್ ತಿಳಿಸಿದರು.ಇದೀಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇತ್ತೀಚಿಗೆ ರಾಂಚಿ ಜಿಲ್ಲೆಯಲ್ಲಿ ಹುಟ್ಟುಹಬ್ಬದ ಸಂತೋಷ ಕೂಟವೊಂದರಲ್ಲಿ ದಂತ ವೈದ್ಯೆಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದರು.
ಏಪ್ರಿಲ್ 9ರಂದು ಲಾಲ್ಪುರ ಪೊಲೀಸ್ ಠಾಣೆ ಪ್ರದೇಶದ ಅಪಾರ್ಟ್ಮೆಂಟ್ನಲ್ಲಿ 25 ವರ್ಷದ ಮಹಿಳೆಯೊಬ್ಬರು ತನ್ನ ಪುರುಷ ಸ್ನೇಹಿತನ ಹುಟ್ಟುಹಬ್ಬದ ಆಚರಣೆಗೆ ಹೋಗಿದ್ದಾಗ ಘಟನೆ ನಡೆದಿತ್ತು. ಆಹ್ವಾನಿತರಲ್ಲಿ ಒಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.ಬೆಳ್ತಂಗಡಿಯಲ್ಲಿ ಬಾಲಕಿಯ ಅತ್ಯಾಚಾರ, ಇಬ್ಬರು ಸೆರೆ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಧರ್ಮಸ್ಥಳ ಪೊಲೀಸರು ಸೆರೆ ಹಿಡಿದಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಹದಿನೈದು ವರ್ಷದ ಬಾಲಕಿಯನ್ನು ಇಬ್ಬರು ಯುವಕರು ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಏಪ್ರಿಲ್ 16ರಂದು ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಈ ವಿಚಾರವನ್ನು ಬಾಲಕಿ ಮನೆಯವರಿಗೆ ತಿಳಿಸಿದ್ದು, ಪೋಷಕರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಏ.17ರಂದು ದೂರು ನೀಡಿದ್ದರು. ಅದರಂತೆ ಪೊಲೀಸರು ಪೋಕ್ಸೋ ಅಡಿ ಕೇಸು ದಾಖಲಿಸಿದ್ದರು. ಬೆಳ್ತಂಗಡಿಯ ಕಡಿರುದ್ಯಾವರ ಗ್ರಾಮದ ಸುಮಂತ್(28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್(26) ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಮಂತ್ ಎಂಬಾತನಿಗೆ ಮೇ 10ರಂದು ಮದುವೆ ನಿಗದಿಯಾಗಿತ್ತು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ದೊರೆತಿದೆ.
