ಉದಯವಾಹಿನಿ, ಅಹಮದಾಬಾದ್: ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಮೂಲಭೂತವಾದಿಗಳನ್ನಾಗಿ ಮಾಡುವ ಮೂಲಕ ದೇಶದ ವಿರುದ್ಧ ಯುದ್ಧ ಸಾರಲು ಯತ್ನಿಸಿದ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಇಬ್ಬರನ್ನು ಬಂಧಿಸಿದೆ.
ಎಟಿಎಸ್ ಪ್ರಕಾರ, ಆರೋಪಿಗಳು “ಘಜ್ವಾ-ಎ-ಹಿಂದ್” ಎಂಬ ಭಯೋತ್ಪಾದಕ ಜಾಲವನ್ನು ರಚಿಸಲು ಯೋಜಿಸುತ್ತಿದ್ದರು. ಅವರು ಆರ್‌ಡಿಎಕ್ಸ್ ಸ್ಫೋಟಕಗಳನ್ನು ಬಳಸಲು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ರಾಜಕೀಯ ನಾಯಕರನ್ನು ಗುರಿಯಾಗಿಸಲು ಸಂಚು ರೂಪಿಸಿದ್ದರು, ತಮ್ಮ ಉದ್ದೇಶಗಳನ್ನು ಪೂರೈಸಲು ಆನ್‌ಲೈನ್‌ನಲ್ಲಿ ಯುವಕರನ್ನು ನೇಮಿಸಿಕೊಳ್ಳಲು ಚಿಂತಿಸಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಠಾಣ್ ಜಿಲ್ಲೆಯ ಸಿದ್ಧಾಪುರದ ನಿವಾಸಿ ಇರ್ಫಾನ್ ಕಲೇಖಾನ್ ಪಠಾಣ್ (22) ಬಗ್ಗೆ ನಿರ್ದಿಷ್ಟ ಮಾಹಿತಿ ದೊರೆತಿದ್ದು, ಈತ ತೀವ್ರವಾದಿ ಇಸ್ಲಾಮಿಕ್ ಸಿದ್ಧಾಂತದಿಂದ ಪ್ರಭಾವಿತನಾಗಿದ್ದನೆಂದು ಹೇಳಲಾಗಿದೆ. ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎಟಿಎಸ್ ಅಧಿಕಾರಿಗಳು ಪಠಾಣ್ ಅನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳ ಮೂಲಕ ಐಸಿಸ್ ಮತ್ತು ಇತರ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇರ್ಫಾನ್ ಪಠಾಣ್ ಜಿಹಾದಿ ಪ್ರಚಾರವನ್ನು ಹರಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮತ್ತು ದೇಶಾದ್ಯಂತ ಸಮಾನ ಮನಸ್ಕರ ಸೇರಿಸಿಕೊಂಡು ಜಾಲವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದ. ತನಿಖೆಯಿಂದ ಇರ್ಫಾನ್ ಪಠಾಣ್ ಹಲವಾರು ಸಾಮಾಜಿಕ ಮಾಧ್ಯಮ ಗುಂಪುಗಳ ಸದಸ್ಯನಾಗಿದ್ದು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಇದೇ ರೀತಿಯ ಉಗ್ರಗಾಮಿ ಸಿದ್ಧಾಂತಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಮೂಲಕ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಸಮಾನ ಮನಸ್ಕ ವ್ಯಕ್ತಿಗಳನ್ನು ಮನಪರಿವರ್ತನೆ ಮಾಡುವುದು ಆತನ ಪ್ರಾಥಮಿಕ ಉದ್ದೇಶವಾಗಿತ್ತು.

Leave a Reply

Your email address will not be published. Required fields are marked *

error: Content is protected !!