ಉದಯವಾಹಿನಿ, ಮಡಿಕೇರಿ: ರಾಜ್ಯದಲ್ಲಿ ಬಿಸಿಲಿನ ತಾಪ ತಾಂಡವವಾಡುತ್ತಿದೆ. ಆದರೆ ಜೀವನದಿ ಕಾವೇರಿ ತವರೂರು ಸಹ ಇದಕ್ಕೆ ಹೊರತಾಗಿಲ್ಲ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಪ್ರಸಕ್ತ ವರ್ಷ 3 ಸಲ ಅಣೆಕಟ್ಟೆ ಭರ್ತಿ ಆಗಿದ್ದರೂ ಈ ವರ್ಷದ ಬೇಸಿಗೆಯ ತಾಪಮಾನಕ್ಕೆ ಹಾರಂಗಿ ಜಲಾಶಯ ಬರಿದಾಗುತ್ತಿದೆ.
ಈ ಬಾರಿ ರಾಜ್ಯದಲ್ಲಿ ಬಿಸಿಲಿನ ತಾಪಮಾನದಿಂದ ರಾಜ್ಯದ ಜನರು ದಿನನಿತ್ಯ ಹೈರಾಣಾಗುತ್ತಿದ್ದಾರೆ. ಅಲ್ಲದೇ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ತಂಪಾದ ವಾತಾವರಣದಿಂದ ಕೂಡಿದ ಕೊಡಗು ಜಿಲ್ಲೆಯಲ್ಲೂ ಈ ವರ್ಷ ಹಿಂದೆದೂ ಕಾಣದ ರೀತಿಯಲ್ಲಿ ಬಿಸಿಲಿನ ಆರ್ಭಟ ಹೆಚ್ಚಾಗಿ ಜಿಲ್ಲೆಯ ನಾನಾ ಭಾಗಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತಿದೆ. ಈ ಹಿನ್ನೆಲೆ ಕಾವೇರಿ ಕಣಿವೆಯ ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಜಲಾಶಯದಲ್ಲೂ ಬಿಸಿಲಿನ ತಾಪದಿಂದ ಜಲಾಶಯದಲ್ಲಿ ದಿನ ಕಳೆದಂತೆ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ.
ಹಾರಂಗಿ ಅಣ್ಣೆಕಟ್ಟಿನಲ್ಲಿ 8.5 ಟಿಎಂಸಿ ಸಂಗ್ರಹಣಾ ಸಾಮರ್ಥ್ಯವಿದ್ದು, ಇದೀಗಾ ಕೇವಲ ಎರಡು ಟಿಎಂಸಿ ನೀರು ಇದೆ. ಅದರಲ್ಲೂ ಒಂದು ಟಿಎಂಸಿ ಕುಡಿಯುವ ನೀರಿಗೆ ಮಾತ್ರ ಯೋಗ್ಯ ಇದ್ದು, ಇನ್ನೂ ಒಂದು ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಹೀಗಾಗಿ ಹಾರಂಗಿ ಜಲಾಶಯವನ್ನೇ ಅವಲಂಬಿಸಿಕೊಂಡಿರುವ ಹತ್ತಾರು ಹಳ್ಳಿಗಳ ಜನರು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂಬ ಆತಂಕದಲ್ಲಿ ಇದ್ದಾರೆ.
