ಉದಯವಾಹಿನಿ, ಬುಲಂದ್ಶಹರ್(ಉತ್ತರ ಪ್ರದೇಶ): ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮುಖಕ್ಕೆ ಕೇಕ್ ಹಚ್ಚುವ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಜಗಳವು ಒಂದೇ ಕುಟುಂಬದ ಮೂವರ ಹತ್ಯೆಯಲ್ಲಿ ಅಂತ್ಯವಾಗಿದೆ. ಈ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಖುರ್ಜಾ ನಗರದ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿರುವ ಜಿಮ್ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಕೊಲೆಗೀಡಾದವರು ಹಾಲಿ ಪುರಸಭೆಯ ಕೌನ್ಸಿಲರ್ನ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಮೂವರ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಘಟನೆಯು ಸ್ಥಳೀಯರಲ್ಲಿ ತ್ರೀವ್ರ ಆತಂಕ ಸೃಷ್ಟಿಸಿದೆ.
ಶನಿವಾರ ತಡರಾತ್ರಿ 12:00 ಗಂಟೆ ಸುಮಾರಿಗೆ, ಸುಭಾಷ್ ರಸ್ತೆಯ ಜಿಮ್ನಲ್ಲಿ ಹುಟ್ಟುಹಬ್ಬದ ಆಚರಣೆ ನಡೆಯುತ್ತಿತ್ತು. ಈ ವೇಳೆ, ಪಾರ್ಟಿಯಲ್ಲಿ ನಡೆದ ಜಗಳದಲ್ಲಿ ಪ್ರೇಮ್ ಸೈನಿ ಎಂಬುವರ ಪುತ್ರ ಮನೀಶ್ ಸೈನಿ (28) ಮತ್ತು ಸೋದರಸಂಬಂಧಿ ಸ್ವರೂಪ್ ಸೈನಿ ಅವರ ಪುತ್ರ ಅಮರ್ದೀಪ್ (28) ಹಾಗೂ ಸೋದರಳಿಯ ರಾಜೀವ್ ಸೈನಿ ಅವರ ಪುತ್ರ ಆಕಾಶ್ (17) ಎಂಬುವರ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಪ್ರಸ್ತುತ, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಡಿಐಜಿ ಕಲಾನಿಧಿ ನೈಥಾನಿ ತಿಳಿಸಿದ್ದಾರೆ.
