ಉದಯವಾಹಿನಿ, ರುಕ್ಮಿಣಿ ವಸಂತ್ ಸೌಂದರ್ಯ, ನಟನಾ ಪ್ರತಿಭೆ, ಸುಂದರ ವ್ಯಕ್ತಿತ್ವ, ಗಾಂಭೀರ್ಯ ಎಲ್ಲವೂ ಸಮನಾಗಿ ಉಳ್ಳ ಕೆಲವೇ ನಟಿಯರಲ್ಲಿ ಒಬ್ಬರು. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಭಾರಿ ಯಶಸ್ವಿನ ಬಳಿಕ ರುಕ್ಮಿಣಿ ವಸಂತ್ ಅವರಿಗೆ ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗಂತೂ ರುಕ್ಮಿಣಿ ವಸಂತ್ ಬಾಲಿವುಡ್ನ ನಿರ್ಮಾಣ ಸಂಸ್ಥೆಯೊಂದರ ಜೊತೆಗೂ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇವುಗಳ ನಡುವೆ, ಖ್ಯಾತ ನಟಿ ಸಾಯಿ ಪಲ್ಲವಿ ನಟಿಸಬೇಕಿದ್ದ ಪ್ರಮುಖ ಸಿನಿಮಾ ಒಂದು ಈಗ ರುಕ್ಮಿಣಿ ವಸಂತ್ ಪಾಲಾಗಿದೆ ಎನ್ನಲಾಗುತ್ತಿದೆ.
ಸಾಯಿ ಪಲ್ಲವಿ ಪ್ರಸ್ತುತ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆಗಿನ ಚಿತ್ರ, ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸೇರಿದಂತೆ ಸಾಲು ಸಾಲು ಚಿತ್ರಗಳು ಅವರ ಕೈಯಲ್ಲಿವೆ. ಇವುಗಳ ಜೊತೆಗೆ ಮಣಿರತ್ನಂ ಅವರ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಒಂದು ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಶಿವಕಾರ್ತಿಕೇಯನ್ ಜೊತೆಗೊಂದು ಸಿನಿಮಾಕ್ಕೂ ಓಕೆ ಹೇಳಿದ್ದಾರೆ. ಈ ಸಿನಿಮಾಗಳ ಜೊತೆಗೆ ಖ್ಯಾತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಜೀವನ ಆಧರಿಸಿದ ಸಿನಿಮಾನಲ್ಲೂ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನಲಾಗಿತ್ತು.
ಆದರೆ ಈಗ ಹೊರಬಿದ್ದಿರುವ ಕೆಲವು ಸುದ್ದಿಗಳ ಪ್ರಕಾರ, ಸಾಯಿ ಪಲ್ಲವಿ ಅವರು ನಟಿಸಬೇಕಿದ್ದ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಾಯಿ ಪಲ್ಲವಿ ಅವರು ಡೇಟ್ಸ್ ಸಮಸ್ಯೆಯಿಂದಾಗಿ ಆ ಸಿನಿಮಾನಿಂದ ಹೊರ ನಡೆದಿದ್ದು, ಆ ಪಾತ್ರ ಈಗ ರುಕ್ಮಿಣಿ ವಸಂತ್ ಅವರ ಪಾಲಾಗಿದೆ ಎನ್ನಲಾಗುತ್ತಿದೆ.
