ಉದಯವಾಹಿನಿ, ಬೆಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪ್ರಿಯಕರನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮದುವೆಯಾದರೂ ಬಯಕೆಗೆ ಮಾತ್ರ ಬಳಸಿಕೊಳ್ತೀನಿ ಅಂತ ಸ್ನೇಹಿತರ ಬಳಿ ಹೇಳುತ್ತಿದ್ದ. ಹೀಗಾಗಿ ಅವಮಾನ ಸಹಿಸಲಾಗದೇ ಬೆಂಕಿ ಹಚ್ಚಿದೆ ಎಂದು ಪ್ರೇಯಸಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ.
ಆರೋಪಿ ಪ್ರೇಮಾ ಪೊಲೀಸರ ತನಿಖೆಯ ವೇಳೆ ಪ್ರಿಯಕರ ಕಿರಣ್ ಹತ್ಯೆಗೆ ಹಲವು ಕಾರಣಗಳನ್ನ ತನಿಖಾಧಿಕಾರಿಗಳ ಮುಂದೆ ಹೇಳಿದ್ದಾಳೆ ಎನ್ನುವ ವಿಚಾರ ಮೂಲಗಳಿಂದ `ಪಬ್ಲಿಕ್ ಟಿವಿ’ಗೆ ತಿಳಿದು ಬಂದಿದೆ. ಕಿರಣ್ನನ್ನು ನಾನು ತುಂಬಾ ಇಷ್ಟಪಡುತ್ತಿದೆ. ಆದರೆ ಕಿರಣ್ ಮಾತ್ರ ನನ್ನನ್ನು ಭೋಗದ ವಸ್ತುವನ್ನಾಗಿ ಅಷ್ಟೇ ನೋಡುತ್ತಿದ್ದ. ಸ್ನೇಹಿತರ ಬಳಿ ನನ್ನ ಸೌಂದರ್ಯದ ಬಗ್ಗೆ ನಿತ್ಯ ಅವಮಾನಿಸುತ್ತಿದ್ದ. ಅಲ್ಲದೇ ಮದುವೆಯಾದರೂ ಬಯಕೆಗೆ ಮಾತ್ರ ಬಳಸಿಕೊಳ್ತೀನಿ ಅಂತ ಸ್ನೇಹಿತರ ಬಳಿ ಹೇಳುತ್ತಿದ್ದ ಎಂದು ಹೇಳಿದ್ದಾಳೆ ಎನ್ನಲಾಗಿದೆ. ಇತ್ತೀಚಿಗೆ ಕಂಡ ಕಂಡವರ ಮುಂದೆ ಅವಮಾನಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ. ಮದುವೆ ಅಂತ ಬಂದಾಗ ಜಾತಿಯ ಲೇಪನ ಮಾಡುತ್ತಿದ್ದ. ನೀನು ಬೇರೆ ಜಾತಿಯಾಗಿರುವ ಕಾರಣ ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದ. ನಾನು ಲವ್ ಪ್ರಪೋಸ್ ಮಾಡಿದಾಗ ಒಪ್ಪಿಕೊಂಡು ನನ್ನನ್ನು ಹೇಗೆ ಬೇಕು ಹಾಗೇ ಬಳಿಸಿಕೊಂಡಿದ್ದಾನೆ. ಆಗ ಜಾತಿ ಮಾತು ಬರಲಿಲ್ಲ, ಈಗ ಮದುವೆ ಆಗು ಅಂದರೆ ಜಾತಿ ಮಾತು ಬರುತ್ತಿದೆ. ಅಲ್ಲದೇ ಬೇರೊಂದು ಹುಡುಗಿಯ ಬಗ್ಗೆ ನನ್ನ ಬಳಿ ಪದೇ ಪದೇ ಪ್ರಸ್ತಾಪ ಮಾಡಿ, ಮಾತನಾಡುತ್ತಿದ್ದ. ಇದೆಲ್ಲವೂ ನನ್ನನ್ನು ಈ ಸ್ಥಿತಿಗೆ ತಂದಿಟ್ಟಿದೆ ಎಂದಿದ್ದಾಳೆ.
