ಉದಯವಾಹಿನಿ,ಬೆಂಗಳೂರು: ರಾಜ್ಯ ಪೊಲೀಸರ ವಿಚಿತ್ರ ನಡೆ ಹಾಗೂ ಕಾರ್ಯವೈಖರಿಯ ಬಗ್ಗೆ ಹೈಕೋರ್ಟ್ ಮತ್ತೊಮ್ಮೆ ಕೆಂಡಾಮಂಡಲವಾಗಿದೆ. “ಪೊಲೀಸರು ಏನು ಬೇಕಾದರೂ ಮಾಡಿಬಿಡುತ್ತೀರಿ, ಆದರೆ ನಿಜವಾದ ಅಪರಾಧಗಳ ಬಗ್ಗೆ ತನಿಖೆ ಮಾಡುವುದನ್ನು ಬಿಟ್ಟು ಜನರನ್ನು ಅಲೆದಾಡಿಸುತ್ತೀರಿ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಚನ್ನಪಟ್ಟಣದ ಎಂ.ಕೆ. ದೊಡ್ಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2024ರಲ್ಲಿ ಎರಡು ಹಸುಗಳು ನಾಪತ್ತೆಯಾಗಿದ್ದವು. ಹಸುಗಳು ಕಾಣೆಯಾದ ಎರಡು ವರ್ಷಗಳ ನಂತರ ಅಂದರೆ 2026ರಲ್ಲಿ ಪೊಲೀಸರು ಈ ಸಂಬಂಧ ದೂರುದಾರನ ನೆರೆಮನೆಯವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದರು. ತಮ್ಮ ಮೇಲೆ ದಾಖಲಾದ ಎಫ್‌ಐಆರ್‌ ರದ್ದುಗೊಳಿಸಬೇಕೆಂದು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು.
ವಿಚಾರಣೆ ಸಂದರ್ಭದಲ್ಲಿ ಹಸುಗಳು ಪತ್ತೆಯಾಗಿಲ್ಲ ಎಂಬ ಕಾರಣಕ್ಕೆ ಪೊಲೀಸರು ಒಂದು ಇಡೀ ಕುಟುಂಬದ ವಿರುದ್ಧವೇ ಪ್ರಕರಣ ದಾಖಲಿಸಿದ್ದಕ್ಕೆ ಸಿಟ್ಟಾದ ನ್ಯಾಯಾಲಯ, ಜನರು ದೂರು ನೀಡಲು ಪೊಲೀಸ್ ಠಾಣೆಗೆ ನೂರು ಬಾರಿ ಅಲೆಯಬೇಕಾಗುತ್ತದೆ. ಅಷ್ಟಾದರೂ ನೀವು ಎಫ್‌ಐಆರ್ ದಾಖಲಿಸುವುದಿಲ್ಲ. ಆದರೆ ಎರಡು ವರ್ಷಗಳ ಹಿಂದೆ ಹಸು ಕಾಣೆಯಾಗಿದೆ ಎಂದ ತಕ್ಷಣ ಇಡೀ ಕುಟುಂಬದ ಮೇಲೆ ಪ್ರಕರಣ ದಾಖಲಿಸುತ್ತೀರಿ. ಇದು ಕಾನೂನಿನ ಸ್ಪಷ್ಟ ದುರ್ಬಳಕೆ ಎಂದು ತರಾಟೆಗೆ ತೆಗೆದುಕೊಂಡಿತು.

Leave a Reply

Your email address will not be published. Required fields are marked *

error: Content is protected !!