ಉದಯವಾಹಿನಿ, ಮೈಸೂರು: ಮೇ 8 ರಂದು ಸಂಜೆ ಮಿನಿ ದಸರಾ ಮಾದರಿಯಲ್ಲಿ ಯಡಿಯೂರಪ್ಪನವರ ಪುರ ಪ್ರವೇಶ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಸಮಾವೇಶದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು.
ಕರ್ನಾಟಕದಲ್ಲಿನ ಪ್ರಸ್ತುತ ರಾಜಕೀಯ ಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೆಲವರು ಅದೃಷ್ಟದಿಂದ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಯಡಿಯೂರಪ್ಪ ಅದೃಷ್ಟದಿಂದ ಮುಖ್ಯಮಂತ್ರಿಯಾದವರಲ್ಲ. ಬದಲಾಗಿ ಅವರು ಸತತ ಹೋರಾಟದಿಂದ ಸಿಎಂ ಆದವರು. ತಮ್ಮ 50 ವರ್ಷ ರಾಜಕಾರಣದಲ್ಲಿ 45 ವರ್ಷ ಯಡಿಯೂರಪ್ಪ ಬರಿ ಹೋರಾಟವನ್ನೇ ಮಾಡಿದ್ದಾರೆ. ಇದೇ ಕಾರಣಕ್ಕೆ ಈ ಸಮಾವೇಶವನ್ನು ಕೈಗೊಂಡಿದ್ದು ಇದರಿಂದ ಯಾವುದೇ ರಾಜಕೀಯದ ಲಾಭದ ಆಸೆ ನನಗಾಗಲಿ ನಮ್ಮ ಪಕ್ಷಕ್ಕಾಗಲಿ ಇಲ್ಲ ಎಂದು ಹೇಳಿದರು.
ಚುನಾವಣೆ ಆರು ತಿಂಗಳಿದ್ದಾಗ ಸಮಾವೇಶ ಕೈಗೊಂಡಿದ್ದರೆ ಈ ರೀತಿಯ ಪ್ರಶ್ನೆಗಳು ಬರುತ್ತಿದ್ದವು. ಆದರೆ ಈಗ ಈ ರೀತಿಯ ಪ್ರಶ್ನೆಗಳಿಗೆ ಅವಕಾಶವಿಲ್ಲ. ಮೇ 8 ರಂದು ಸಂಜೆ ಮಿನಿ ದಸರಾ ಮಾದರಿಯಲ್ಲಿ ಯಡಿಯೂರಪ್ಪನವರ ಪುರ ಪ್ರವೇಶ ಆಗುತ್ತದೆ. ಸಮಾವೇಶದಲ್ಲಿ ರಾಜಕಾರಣಿಗಳಷ್ಟೇ ಅಲ್ಲ ರಾಜ್ಯದ ಬಹುತೇಕ ಮಠಾಧೀಶರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಸಂದೇಶ ಏನು ಎಂಬುವುದು ಸಮಾವೇಶ ಮುಗಿದ ಬಳಿಕ ಗೊತ್ತಾಗಲಿದೆ. ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆಯಲ್ಲಿದ್ದೇವೆ. ಎಂದು ಅವರು ಮಾತನಾಡಿದರು.
