ಉದಯವಾಹಿನಿ, ಭೋಪಾಲ್: ಮಧ್ಯಪ್ರದೇಶದ ಜಬಲ್‌ಪುರ ಬಳಿ ನರ್ಮದಾ ನದಿಯಲ್ಲಿ ಸಂಭವಿಸಿದ ಕ್ರೂಸ್ ಬೋಟ್ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದರ ಬಗ್ಗೆ ಬೋಟ್ ಚಾಲಕ ಮಹೇಶ್ ಪಟೇಲ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ಮಾಧ್ಯಮಗಳ ಜೊತೆ ಮಾತಾಡಿರುವ ಅವರು, ಖಮರಿಯಾ ದ್ವೀಪದಿಂದ ಹೊರಟಾಗ ಹವಾಮಾನ ಸಾಮಾನ್ಯವಾಗಿತ್ತು. ನೀರಿನ ಮಧ್ಯಭಾಗ ತಲುಪಿದಾಗ ಗಾಳಿ ಬೀಸಲು ಪ್ರಾರಂಭಿಸಿತು. ಕೆಟ್ಟ ಹವಾಮಾನ ಇದೆ ವಾಪಸ್‌ ಆಗಿ ಎಂಬ ಯಾವ ಎಚ್ಚರಿಕೆ ಅಥವಾ ಸೂಚನೆ ನೀಡಲಿಲ್ಲ. ಗಾಳಿ ತೀವ್ರಗೊಂಡು ಅಲೆಗಳು ದೋಣಿಗೆ ಅಪ್ಪಳಿಸಲು ಪ್ರಾರಂಭಿಸಿದಾಗ, ದಡದ ಕಡೆಗೆ ವಾಪಸ್‌ ಆಗಲು ನಿರ್ಧರಿಸಿದೆ.
ದೋಣಿಗೆ ನೀರು ಪ್ರವೇಶಿಸಲು ಪ್ರಾರಂಭಿಸಿದಾಗ ಪ್ರಯಾಣಿಕರು ಭಯಪಟ್ಟರು. ಪ್ರವಾಸಿಗರ ರಕ್ಷಣೆಗೆ ಮತ್ತೊಂದು ದೋಣಿಯನ್ನು ಕಳುಹಿಸಲು ಎಚ್ಚರಿಕೆ ನೀಡಲಾಯಿತು. ಬೋಟ್‌ನ ಎಂಜಿನ್‌ಗೆ ನೀರು ನುಗ್ಗಿ ದೋಣಿಯ ಮೇಲಿನ ನಿಯಂತ್ರಣ ಕಳೆದುಕೊಂಡಾಗ, ದಡ ತಲುಪಲು ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಾಯಿತು. ಈ ವೇಳೆ ನಾನು ಪ್ರಯಾಣಿಕರ ರಕ್ಷಣೆಗೆ ಪ್ರಯತ್ನಿಸಿದೆ. 9 ಮಂದಿ ಸಾವನ್ನಪ್ಪಿದ್ದಕ್ಕೆ ನಾನು ಕ್ಷಮೆಯಾಚಿಸಿದ್ದೇನೆ ಎಂದಿದ್ದಾರೆ. ದುರಂತದ ವೇಳೆ ದೋಣಿಯ ಸಿಬ್ಬಂದಿ ಲೈಫ್ ಜಾಕೆಟ್‌ಗಳನ್ನು ಆತುರದಿಂದ ಬಿಚ್ಚುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಪ್ರಯಾಣಿಕರು ಡ್ಯಾನ್ಸ್‌ ಮಾಡುತ್ತಾ ಸಂಭ್ರಮಿಸುತ್ತಿದ್ದರು. ಮೊದಲು ಅವರೆಲ್ಲ ಲೈಫ್ ಜಾಕೆಟ್‌ ನಿರಾಕರಿಸಿದ್ದರು ಎಂದು ಹೇಳಿದ್ದಾರೆ.ಕ್ರೂಸ್ ಸಹಾಯಕ ಛೋಟೆಲಾಲ್ ಗೊಂಡ್ ಮತ್ತು ಟಿಕೆಟ್ ಕೌಂಟರ್ ಇನ್‌ಚಾರ್ಜ್ ಬ್ರಿಜೇಂದ್ರ ಹಾಗೂ ನನ್ನನ್ನು (ಮಹೇಶ್ ಪಟೇಲ್) ಕೆಲಸದಿಂದ ವಜಾಗೊಳಿಸಲಾಗಿದೆ. ಕೆಲಸದಿಂದ ಗಳಿಸಿದ ಕಡಿಮೆ ಸಂಬಳದಲ್ಲೇ ನಮ್ಮ ಕುಟುಂಬ ಜೀವನ ಮಾಡುತ್ತಿದೆ. ಈಗ ನಮ್ಮ ಕುಟುಂಬ ಸಮಸ್ಯೆ ಎದುರಿಸಲಿದೆ. ನಾನು ಆಘಾತಕ್ಕೊಳಗಾಗಿದ್ದೇನೆ, ಊಟ ಮಾಡಲು, ನಿದ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!