ಉದಯವಾಹಿನಿ, ಬೆಂಗಳೂರು: ಪಂಚ ರಾಜ್ಯಗಳ ಮತದಾನ ಮುಗಿದ ಕೂಡಲೇ ಕೇಂದ್ರ ಬಿಜೆಪಿ ಸರ್ಕಾರ ವಾಣಿಜ್ಯ ಬಳಕೆ ಅಡುಗೆ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ದರ ಹೆಚ್ಚಳ ಮಾಡಿದ್ದು, ತನ್ನ ಬಡವರ ವಿರೋಧಿ ನೀತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 1ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದರ ಸುಮಾರು 1,300 ರೂ. ಹೆಚ್ಚಳವಾಗಿದೆ. ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಊಟ, ತಿಂಡಿ, ಕಾಫಿ, ಟೀ ದರ ಹೆಚ್ಚಳ ಮಾಡುತ್ತಾರೆ. ಇದರ ಹೊರೆ ಶ್ರೀಸಾಮಾನ್ಯನ ಮೇಲೆ ಬೀಳಲಿದೆ. ಮತದಾನ ಮುಗಿದ ಕೂಡಲೇ ಕೇಂದ್ರ ಬಿಜೆಪಿ ಸರ್ಕಾರ ಬಡ, ಮಧ್ಯಮವರ್ಗದವರ ಬದುಕನ್ನು ದುರ್ಬರ ಮಾಡಲು ಹೊರಟಿದೆ ಎಂದು ಕಿಡಿಕಾರಿದರು. ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಸಮರ್ಪಕವಾಗಿ ಅಡುಗೆ ಅನಿಲ ಪೂರೈಕೆ ಆಗದೆ ಈಗಾಗಲೇ ಹಲವು ಹೋಟೆಲ್‌ಗಳು ಬಂದ್ ಆಗಿದ್ದು, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಈ ಸನ್ನಿವೇಶದಲ್ಲಿ 993 ರೂ. ಪ್ರತಿ ಸಿಲಿಂಡರ್ ಗೆ ಹೆಚ್ಚಳ ಮಾಡುವ ಮೂಲಕ ಕಾರ್ಮಿಕ ದಿನದಂದು ಕೇಂದ್ರ ಸರ್ಕಾರ ತನ್ನ ಕಾರ್ಮಿಕ ವಿರೋಧಿ ನೀತಿ ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರತಿ ಸಾಲಲ್ಲಿ ನಿಂತರೂ ಸಿಎನ್‌ಜಿ ಅನಿಲ ಸಿಗದೆ ತತ್ತರಿಸಿರುವ ಆಟೋ ಚಾಲಕರ ಮೇಲೂ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡಿದೆ. ಯುಪಿಎ ಕಾರ್ಯಕಾಲದಲ್ಲಿ ಅಡುಗೆ ಅನಿಲ ದರ 10-15 ರೂ. ಹೆಚ್ಚಳವಾದರೆ, ರೂಪಾಯಿ ಮೌಲ್ಯ ಡಾಲರ್ ಎದುರು ಕೆಲವೇ ಪೈಸೆ ಕುಸಿತವಾದರೂ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ನಾಯಕರು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಅವರು ಈಗ ತಮ್ಮ ತಾಕತ್ತು ಪ್ರದರ್ಶಿಸಲಿ, ಪ್ರಧಾನಿ ನರೇಂದ್ರ ಮೋದಿ ದುರಾಡಳಿತದ ವಿರುದ್ಧ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!