ಉದಯವಾಹಿನಿ, ಹಾಸನ: ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣ ಸಿಟ್ಟಿಗೆದ್ದ ಕೀಚಕ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಅತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಮ್ಯಾ.ಎ.ಆರ್. (35) ಕೊಲೆಯಾದ ಮಹಿಳೆ. ಚಂದ್ರ (41) ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿ. ಎರಡು ವರ್ಷಗಳ ಹಿಂದೆ ರಮ್ಯಾಳ ಪತಿ ಉಮೇಶ್ ಮೃತಪಟ್ಟಿದ್ದು, ಪತಿ ಮರಣದ ನಂತರ ಅದೇ ಗ್ರಾಮದ ಚಂದ್ರನ ಜೊತೆ ರಮ್ಯಾ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಬೆಂಗಳೂರಿನ ಜೆ.ಪಿ.ನಗರದ ಮನೆಯೊಂದರಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ರಮ್ಯಾ ಏ.28 ರಂದು ಅತ್ತೆ ಕಾಳಮ್ಮ ನಿಧನರಾದ ಕಾರಣ ಅಂದು ಬೆಂಗಳೂರಿನಿಂದ ಅತ್ತಿಹಳ್ಳಿ ಗ್ರಾಮಕ್ಕೆ ಬಂದಿದ್ದರು. ಅತ್ತೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಮನೆಯಲ್ಲಿ ಮಲಗಿದ್ದ ವೇಳೆ ಮನೆಗೆ ಬಂದ ಚಂದ್ರು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ರಮ್ಯಾ ಒಪ್ಪದ್ದರಿಂದ ಸಿಟ್ಟಿಗೆದ್ದ ಚಂದ್ರ ರಮ್ಯಾಳ ಮೇಲೆ ಹಲ್ಲೆ ನಡೆಸಿ ಗುಪ್ತಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದ.
ಏ.30 ರಂದು ರಮ್ಯಾಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
