ಉದಯವಾಹಿನಿ, ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ದಿನ ಕಳೆದಂತೆ ಸ್ವಾಮೀಜಿ ಬೆಂಬಲಿಗರು ಹಾಗೂ ಟ್ರಸ್ಟಿಗಳ ನಡುವಿನ ಗಲಾಟೆ ಜೋರಾಗುತ್ತಿದೆ. ಈ ಹಿನ್ನೆಲೆ ಮಠದಲ್ಲಿ ಸಭೆ, ಸಮಾರಂಭ ಮಾಡದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ.
ಮಠದಲ್ಲಿ ಕಳೆದ ಮಾ.10 ರಿಂದ ಎರಡು ಕಡೆ ಬೆಂಬಲಿಗರಿಂದ ಸಭೆ, ಸಮಾರಂಭ, ಸುದ್ದಿಗೋಷ್ಠಿಗಳು ನಡೆಯುತ್ತಿವೆ. ಇವುಗಳು ವಿಕೋಪಕ್ಕೆ ತಿರುಗಿದ್ದು, ಗಲಾಟೆಗಳು, ಪ್ರಚೋದನಕಾರಿ ಹೇಳಿಕೆಗಳು ಬರುತ್ತಿವೆ. ಇದರಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ, ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಪೊಲೀಸ್ ಇಲಾಖೆ ಪದೇ ಪದೇ ಭದ್ರತೆ ನೀಡಲು ಆಗುವುದಿಲ್ಲ. ಅದ್ದರಿಂದ ಪಂಚಮಸಾಲಿ ಪೀಠದಲ್ಲಿ ಯಾವುದೇ ಸಭೆ, ಸಮಾರಂಭ, ಪತ್ರಿಕಾ ಗೋಷ್ಠಿ ನಡೆಸುವಂತಿಲ್ಲ. ಈ ಬಗ್ಗೆ ಸ್ವಾಮೀಜಿಗೆ, ಟ್ರಸ್ಟಿಗಳಿಗೆ ಹಾಗೂ ಅವರ ಬೆಂಬಲಿಗರಿಗೆ ಜಿಲ್ಲಾಡಳಿತದಿಂದ ಹಾಗೂ ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಿ ಮೇ 1 ರಿಂದ 30 ರವರಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇಂದು (ಮೇ 5) ಟ್ರಸ್ಟಿಗಳ ವಿರುದ್ಧ ಸ್ವಾಮೀಜಿ ಬೆಂಬಲಿಗರು ಲೆಕ್ಕಕೊಡಿ ಅಭಿಯಾನ ಹಮ್ಮಿಕೊಂಡಿದ್ದರು. ಏ.27 ರಂದು ಟ್ರಸ್ಟಿಗಳು ಸುಳ್ಳು ಲೆಕ್ಕ ನೀಡಿದ್ದಾರೆ. ಪಾರದರ್ಶಕ ಲೆಕ್ಕ ಮಂಡನೆ ಮಾಡಬೇಕು ಎಂದು ಆಗ್ರಹಿಸಲು ಮುಂದಾಗಿದ್ದರು. ಅಲ್ಲದೇ ಹಳ್ಳಿ ಹಳ್ಳಿಗೂ ತೆರಳಿ ಭಕ್ತರು ನೀಡಿದ ಕಾಣಿಕೆ ಬಗ್ಗೆ ಪಟ್ಟಿ ಮಾಡಲು ಸ್ವಾಮೀಜಿ ಬೆಂಬಲಿಗರು ಮುಂದಾಗಿದ್ದಾರೆ. ನಿಷೇಧಾಜ್ಞೆ ನಡುವೆಯೂ ಸಭೆ ನಡೆಸಲು ಸ್ವಾಮೀಜಿ ಬೆಂಬಲಿಗರು ಯತ್ನಿಸಿದ್ದಾರೆ.
