ಉದಯವಾಹಿನಿ, ಮುಂಬೈ: ಮಟನ್ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದಿದ್ದರಿಂದ ಫುಡ್ ಪಾಯಿಸನ್ ಆಗಿ ಮುಂಬೈನ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅವರು ಮೃತಪಟ್ಟಿರುವುದು ಕಲ್ಲಂಗಡಿ ಸೇವನೆಯಿಂದಲ್ಲ, ಬದಲಾಗಿ ಇಲಿ ಪಾಷಾಣದಿಂದ ಎಂಬುದು ವಿಧಿವಿಜ್ಞಾನ ಪರೀಕ್ಷೆಯಿಂದ ದೃಢಪಟ್ಟಿದೆ.
ಮೃತರ ದೇಹದಲ್ಲಿ ಹಾಗೂ ಅವರು ತಿಂದಿದ್ದ ಕಲ್ಲಂಗಡಿ ಹಣ್ಣಿನ ಮಾದರಿಯಲ್ಲಿ ಇಲಿಗಳನ್ನು ಕೊಲ್ಲಲು ಬಳಸುವ ಝಿಂಕ್ ಫಾಸ್ಫೈಡ್ ಎಂಬ ವಿಷಕಾರಿ ರಾಸಾಯನಿಕದ ಅಂಶಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಯ ವೇಳೆ ಮೃತರ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿತ್ತು. ಇದು ವಿಷಪ್ರಾಶನದ ಸ್ಪಷ್ಟ ಲಕ್ಷಣವಾಗಿದ್ದು, ಇದೀಗ ವಿಧಿವಿಜ್ಞಾನ ವರದಿಯು ಸಾವಿನ ಅಸಲಿ ಕಾರಣವನ್ನು ಬಯಲು ಮಾಡಿದೆ.ಅಬ್ದುಲ್ಲಾ ಡೊಕಾಡಿಯಾ (45), ಪತ್ನಿ ನಸ್ರೀನ್ (35), ಮಕ್ಕಳಾದ ಝೈನಬ್ (13) ಮತ್ತು ಆಯೇಷಾ ಬಿರಿಯಾನಿ ಬಳಿಕ ಕಲ್ಲಂಗಡಿ ಹಣ್ಣು ತಿಂದು ತೀವ್ರ ವಾಂತಿ ಮತ್ತು ಭೇಧಿಯಿಂದ ಮೃತಪಟ್ಟಿದ್ದರು. ಈ ಕುಟುಂಬ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸಂಬಂಧಿಕರಿಗೆ ಔತಣಕೂಟ ಏರ್ಪಡಿಸಿತ್ತು. ರಾತ್ರಿ ಊಟಕ್ಕೆ ಮಟನ್ ಬಿರಿಯಾನಿ ಬಡಿಸಲಾಗಿತ್ತು. ಊಟ ಮುಗಿಸಿ ಸಂಬಂಧಿಕರು ತೆರಳಿದ ಬಳಿಕ, ಮಧ್ಯರಾತ್ರಿ ಕುಟುಂಬದ ನಾಲ್ವರು ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಾಲ್ವರಿಗೂ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಎಲ್ಲರೂ ಪ್ರಾಣಬಿಟ್ಟಿದ್ದರು.
