
ಉದಯವಾಹಿನಿ ಯಾದಗಿರಿ; ವಸತಿ ನಿಲಯವನ್ನು ನಿಮ್ಮ ಮನೆ ಎಂದು ಪರಿಗಣಿಸಿ ಶ್ರಮದಾನ ಮಾಡಿ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ವಕ್ಫ್ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಜೈನ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಯಾದಗಿರಿ ನಗರದಲ್ಲಿನ ಹಳೆ ಆಸ್ಪತ್ರೆ, ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು, ಅಲ್ಲಿಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಬಂದಳ್ಳಿ ಗ್ರಾಮದ ಹತ್ತಿರವಿರುವ ಮೆಟ್ರಿಕ್ ನಂತರದ ಅಲ್ಪಸಂಖ್ಯಾತ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕುಡಿಯುವ ನೀರು, ಶೌಚಾಲಯ, ಊಟದ ಮನೆ, ಅಡುಗೆ ಕೋಣೆ, ಸುತ್ತಲಿನ ಪರಿಸರ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಲ್ಲಿ ಸಿಬ್ಬಂದಿ ವರ್ಗದವರ ಜೊತೆಗೂ ವಿದ್ಯಾರ್ಥಿಗಳ ಪಾತ್ರವು ಬಹಳ ಮುಖ್ಯವಾಗಿದೆ. ಮುಂದಿನ ವಿದ್ಯಾರ್ಥಿಗಳಿಗೆ ನೀವು ಮಾದರಿಯಾಗಿರಬೇಕು ಎಂದು ಅವರು ನುಡಿದರು.ವಸತಿ ನಿಲಯದ ಊಟ ಉಪಹಾರ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿ, ಗುಣಮಟ್ಟದ ಊಟ ನೀಡಿ, ಸರಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಲೋಪವಾಗದಂತೆ ಒದಗಿಸಬೇಕು ಎಂದು ಮೇಲ್ವಿಚಾರಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಕುಂದುಕೊರತೆ ವಿಚಾರಿಸಿ, ಸಮಯ ವ್ಯರ್ಥ ಮಾಡದೆ ಉತ್ತಮವಾಗಿ ವ್ಯಾಸಂಗ ಮಾಡಬೇಕೆಂದು ಕಿವಿಮಾತು ಹೇಳಿದರು.
*ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆ, ಹಳೆ ಆಸ್ಪತ್ರೆ , ಅಲ್ಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಪರಿಶೀಲನೆ*
ಜಿಲ್ಲೆಯಲ್ಲಿ ಒಳ್ಳೆಯ ಸುಸಜ್ಜಿತ ಕಟ್ಟಡಗಳು ತಲೆಯೆತ್ತಿ ನಿಲ್ಲುತ್ತಿವೆ. ಮೂಲ ಸೌಕರ್ಯಗಳ ಜೊತೆಗೆ ಜಿಲ್ಲೆಯು ಅಭಿವೃದ್ಧಿಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಜಿಲ್ಲೆಯ ಬಹುದಿನಗಳ ಕನಸು ನನಸಾಗಿದೆ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಈ ಸೌಭಾಗ್ಯವನ್ನು ಸದುಪಯೋಗ ಪಡೆದು ಒಳ್ಳೆಯ ಡಾಕ್ಟರ್ ಗಳಾಗಿ ಹೊರಹೊಮ್ಮಬೇಕು ಎಂದ ಅವರು ನೀವು ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಾಗಿದ್ದೀರಿ ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಅಭಿನಂದಿಸಿದರು.
ಜಿಲ್ಲಾಸ್ಪತ್ರೆ, ನಗರದ ಹಳೆ ಆಸ್ಪತ್ರೆ , ಅಲ್ಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅವರು ಆಸ್ಪತ್ರೆಗೆ ಬರುವ ಜಿಲ್ಲೆಯ ಜನರ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಿ ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಆಸ್ಪತ್ರೆಯ ಎಲ್ಲಾ ವಾರ್ಡ್ಗಳು, ಚುಚ್ಚು ಮದ್ದು ಕೊಠಡಿ, ಔಷಧಿ ವಿತರಣಾ ಕೊಠಡಿ, ಅಪರೇಷನ್ ಕೊಠಡಿ ಸೇರಿದಂತೆ ಎಲ್ಲಾ ವಿಭಾಗಳಿಗೂ ಸಂಚರಿಸಿ ಅಸ್ಪತ್ರೆಯ ಬಗ್ಗೆ ಮಾಹಿತಿ ಪಡೆದು, ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಕಲೆಹಾಕಿ ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಪರಿಶೀಲನೆ ನಡೆಸಿದರು.
ಯಾವುದೇ ಕಾರಣಕ್ಕೂ ರೋಗಿಗಳಿಗೆ ಔಷಧಿಯ ಕೊರತೆಯಾಗಬಾರದು. ಆಸ್ಪತ್ರೆಗಳಲ್ಲಿ ಶುದ್ದ ಕುಡಿಯುವ ನೀರು ಮತ್ತು ಬಾಣಂತಿಯರಿಗೆ ಬಿಸಿ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಕರ್ತವ್ಯಕ್ಕೆ ಹಾಜರಾಗುವಾಗ ವೈದ್ಯರು, ಸಿಬ್ಬಂದಿಗಳು ಸಮಯಪಾಲನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಪ್ರವೀಣಕುಮಾರ, ಡಿಹೆಚ್ಓ ಡಾ. ಗುರುರಾಜ ಹಿರೇಗೌಡ, ವೈದ್ಯಕೀಯ ಕಾಲೇಜು ಡೀನ್ ಹನುಮಂತ ಪ್ರಸಾದ್, ಮೆಡಿಕಲ್ ಕಾಲೇಜಿನ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ, ಆರ್ಸಿಹೆಚ್ಓ ಡಾ. ಮಲ್ಲಪ್ಪ, ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಯಾದಗಿರಿ ತಾಲೂಕು ಪಂಚಾಯತ ಇಓ ಬಸವರಾಜ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
3 Attachments • Scanned by Gmail
