ಉದಯವಾಹಿನಿ, ಬೆಳ್ಳಿತೆರೆಯ ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ ಅವರು ಸದ್ಯ ಸಿನಿಮಾ ಶೂಟಿಂಗ್ ಗಳಿಗೆ ಅಲ್ಪ ವಿರಾಮ ಹೇಳಿ ದೇಗುಲದತ್ತ ಮುಖಮಾಡಿದ್ದು, ಇಂದು ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ’ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಮುಂಜಾನೆವೇ ದೇಗುಲಕ್ಕೆ ಭೇಟಿ ನೀಡಿದ ತಮನ್ನಾ, ಪವಿತ್ರವಾದ ‘ಭಸ್ಮ ಆರತಿ’ಯಲ್ಲಿ ಭಾಗವಹಿಸಿದರು. ಈ ವೇಳೆ ಮಹಾಕಾಳನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಖ್ಯಾತ ನಿರ್ಮಾಪಕಿ ಪ್ರಜ್ಞಾ ಕಪೂರ್ ಜೊತೆ ಸಾಂಪ್ರದಾಯಿಕವಾಗಿ ಸೀರೆಯನ್ನು ಉಟ್ಟು ಬಂದಿದ್ದ ಅವರು, ದೇವಸ್ಥಾನದಲ್ಲಿ ಆಧ್ಯಾತ್ಮಿಕ ಸಮಯ ಕಳೆದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತಮನ್ನಾ, ಮಹಾಕಾಳೇಶ್ವರನ ದರುಶನ ನಾವು ಅಂದುಕೊಂಡಂತೆ ಬಂದು ಪಡೆಯಲು ಸಾಧ್ಯವಿಲ್ಲ. ಯಾವಾಗದ ಆ ದೇವರ ಕರೆ ಬರುತ್ತದೆ ಅಂದು ಇಲ್ಲಿಗೆ ಬರಲು ಸಾಧ್ಯವಾಗುತ್ತದೆ. ಹೀಗಾಗಿ ಇಂದು ಆ ಈಶ್ವರನೇ ನನ್ನನ್ನು ಇಲ್ಲಿಗೆ ಕರೆಯಿಸಿಕೊಂಡಿದ್ದಾನೆ ಎಂದು ಹೇಳಿದರು.
ಇಲ್ಲಿಗೆ ಬಂದ ಬಳಿಕ ಇಲ್ಲಿನ ವಾತಾವರಣ, ಮಂತ್ರಘೋಷಗಳು ಮನಸ್ಸಿಗೆ ಶಾಂತಿ ಮತ್ತು ಹೊಸ ಧನಾತ್ಮಕ ಶಕ್ತಿಯನ್ನು ನೀಡಿವೆ ಎಂದು ಖುಷಿ ಹಂಚಿಕೊಂಡರು.
ಸದ್ಯ ತಮನ್ನಾ ಅವರ ಈ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮನ್ನಾ ಅವರ ಆಧ್ಯಾತ್ಮಿಕ ನಡೆಯನ್ನು ಕೊಂಡಾಡುತ್ತಿದ್ದಾರೆ.
