
ಉದಯವಾಹಿನಿ ಮಾಲೂರು:– ಕುಡಿಯನೂರು ಗ್ರಾಪಂ ಅಧ್ಯಕ್ಷರಾಗಿ ವನಜಾಕ್ಷಿ ನಂಜುಂಡೇಶ್ವರ, ಉಪಾಧ್ಯಕ್ಷರಾಗಿ ಅಮೃತವಾಣಿ ಅಮರೇಶ್ ಚುನಾಯಿತರಾಗಿದ್ದಾರೆ.
ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ವನಜಾಕ್ಷಿ ನಂಜುಂಡೇಶ್ವರ, ಬಿಜೆಪಿ ಬೆಂಬಲಿತ ಮಂಜುಳಮ್ಮ, ಮತ್ತು ಎಸ್ಸಿ ಮಹಿಳಾ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಅಮೃತವಾಣಿ ಅಮರೇಶ್, ಬಿಜೆಪಿ ಬೆಂಬಲಿತ ಜಯಲಕ್ಷ್ಮಮ್ಮ ನಾಮಪತ್ರ ಸಲ್ಲಿಸಿದ್ದು, ಅಂತಿಮವಾಗಿ 10 ಮತ ಪಡೆದು ವನಜಾಕ್ಷಿ ನಂಜುಂಡೇಶ್ವರ ಅಧ್ಯಕ್ಷರಾಗಿ, 10 ಮತ ಪಡೆದು ಅಮೃತವಾಣಿ ಅಮರೇಶ್ ಉಪಾಧ್ಯಕ್ಷರಾಗಿ ಚುನಾಯಿತರಾದರೆ ಮಂಜುಳಮ್ಮ 6 ಮತ, ಜಯಲಕ್ಷ್ಮಮ್ಮ 6 ಮತ ಪಡೆದು ಪರಾಜಿತಗೊಂಡರು.
ನೂತನ ಅಧ್ಯಕ್ಷೆ ವನಜಾಕ್ಷಿ ನಂಜುಂಡೇಶ್ವರ ಅವರು ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಚುನಾವಣೆಯಲ್ಲಿ ನಾವು ಜಯಗಳಿಸಲು ಕಾರಣರಾದ ಶಾಸಕರಾದ ಕೆ.ವೈ.ನಂಜೇಗೌಡರಿಗೆ ಮತ್ತು ಗ್ರಾಪಂ ಸದಸ್ಯರಿಗೆ ಋಣಿಯಾಗಿದ್ದು, ಗ್ರಾಪಂನ ಎಲ್ಲಾ ಗ್ರಾಮಗಳನ್ನು ಶಾಸಕರ ಸಹಕಾರ ಪಡೆದು ಪಕ್ಷಾತೀತವಾಗಿ ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಒತ್ತು ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸಂತೆಹಳ್ಳಿ ನಾರಾಯಣಸ್ವಾಮಿ, ದ್ಯಾಪಸಂದ್ರ ನಾರಾಯಣಗೌಡ, ಕರಿಯಣ್ಣ, ವೆಂಕಟೇಶ್ ಪಟ್ಟಾಭಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
