
ಉದಯವಾಹಿನಿ,ಶಿಡ್ಲಘಟ್ಟ: ಅಕ್ಕಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದರೂ ಸಹ ಕೇಂದ್ರ ಸರ್ಕಾರ ನಮಗೆ ಅಕ್ಕಿಯನ್ನು ಕೊಡಲಿಲ್ಲ ಆದರೂ ಮತದಾರರಿಗೆ ಕೊಟ್ಟ ಮಾತಿಗೆ ಬದ್ಧರಾಗಿ ಅಕ್ಕಿ ಬದಲಿಗೆ ಹಣ ಕೊಡುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದರು. ಶಿಡ್ಲಘಟ್ಟ ನಗರದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಶೀಘ್ರದಲ್ಲಿ ಬಿಪಿಎಲ್ ಕಾರ್ಡುಗಳಿಗೆ ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥಪಡಿಸಿ ಕಾರ್ಡ್ ಗಳನ್ನು ವಿತರಿಸುವ ಕೆಲಸ ಮಾಡಲಿದ್ದೇವೆ ಮುಂದಿನ ದಿನಗಳಲ್ಲಿ ಅವರಿಗೂ ಸಹ ಪಡಿತರ ಪದಾರ್ಥ ಸಿಗಲಿದೆ ಆಂಧ್ರ ತೆಲಂಗಾಣ ಸರ್ಕಾರಿಗಳೊಂದಿಗೆ ಈಗಾಗಲೇ ಮಾತನಾಡಿ ಅಲ್ಲಿ ಅಕ್ಕಿ ಸಿಗುವ ಭರವಸೆ ಇದೆ ಆಗ ಎಲ್ಲರಿಗೂ ಅಕ್ಕಿ ಸಿಗುತ್ತದೆ ಎಂದರು. ಅಕ್ಕಿ ದೊರೆತ ಮೇಲೆ ಅಕ್ಕಿಯನ್ನೆ ವಿತರಿಸುತ್ತೇವೆ. ಅಲ್ಲಿಯವರೆಗೂ ಅಕ್ಕಿ ಬದಲಿಗೆ ತಲಾ 170 ರೂ ನಂತೆ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುತ್ತೇವೆ. ಈಗಾಗಲೇ ಒಂದು ತಿಂಗಳ ಅಕ್ಕಿಯ ಹಣ ಜಮೆ ಮಾಡಿದ್ದು, ಆಗಸ್ಟ್ ತಿಂಗಳ ಹಣ ಮುಂದಿನ ಹತ್ತು ದಿನಗಳಲ್ಲಿ ಬೀಳಲಿದೆ ಎಂದು ತಿಳಿಸಿದರು. ಇನ್ನು ಎಪಿಎಲ್ ಕಾರ್ಡುದಾರರಿಗೆ ತಲಾ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಕೆಜಿ ಗೆ 15 ರೂ ನಂತೆ ಗ್ರಾಹಕರಿಗೆ ನೀಡಲಿದ್ದು, ಇನ್ನುಳಿದ ಹಣವನ್ನು ಸರ್ಕಾರ ಭರಿಸುತ್ತಿದೆ.
ಆ.30 ಕ್ಕೆ ಗೃಹಲಕ್ಷ್ಮಿ ಗೆ ಚಾಲನೆ : ಸರ್ಕಾರದ ಮಹತ್ತರ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ರಾಜ್ಯಾದ್ಯಂತ ಆ.30 ರಂದು ಜಾರಿ ಮಾಡಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಆಗಮಿಸುವ ನೀರಿಕ್ಷೆಯಿದೆ. ಆ ಮೂಲಕ ನಾಲ್ಕು ಯೋಜನೆಗಳನ್ನು ಜಾರಿ ಮಾಡಿದಂತಾಗುತ್ತದೆ ಎಂದರು. ಇನ್ನುಳಿದಂತೆ ನಿರುದ್ಯೋಗ ನಿಧಿ ಮಾತ್ರ ಜಾರಿ ಮಾಡುವುದು ಬಾಕಿ ಇದ್ದು, ಡಿಸೆಂಬರ್ ನಲ್ಲಿ ಜಾರಿಮಾಡಲು ತಯಾರಿ ನಡೆಸುತ್ತಿದ್ದೇವೆ ಎಂದರು.
