ಉದಯವಾಹಿನಿ ಕೊಪ್ಪಳ : ಜಿಲ್ಲಾ ಮಟ್ಟದ ಯುವ ಉತ್ಸವ-2023 ವನ್ನು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಹಾಗೂ ನೆಹರು ಯುವ ಕೇಂದ್ರ ಕೊಪ್ಪಳ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.ಉತ್ಸವ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ನಮ್ಮ ಯುವಕರು ನಮ್ಮ ರಾಷ್ಟ್ರದ ಭವಿಷ್ಯವಾಗಿರುವುದರಿಂದ ರಾಷ್ಟ್ರದ ಸಂಪನ್ಮೂಲ ಮತ್ತು ಜವಾಬ್ದಾರಿಯುತ ನಾಗರಿಕರಾಗಲು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಯುವಜನರು ಈ ರೀತಿಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಪ್ರೇರೇಪಣೆ ನೀಡಿದರು. ಜಿಲ್ಲಾ ಮಟ್ಟದ ಯುವ ಉತ್ಸವವು ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ನಾಯಕತ್ವ, ಸಾಮಾಜಿಕ ಜವಾಬ್ದಾರಿ ಮತ್ತು ಸಾಂಘಿಕ ಕಾರ್ಯವನ್ನು ಉತ್ತೇಜಿಸುವ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅತ್ಯುತ್ತಮ ವೇದಿಕೆಯನ್ನು ಒದಗಿಸಿದೆ ಎಂದು ಹೇಳಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪತ್ರಕರ್ತರಾದ ಮುಖ್ಯ ಅತಿಥಿ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಸಾಮಾಜಿಕ ಜವಾಬ್ದಾರಿ ಹೊತ್ತಿರುವ ಉತ್ತಮ ಯುವಜನರ‌ ನಿರ್ಮಾಣಕ್ಕೆ ಕಲಾ‌ಉತ್ಸವಗಳು ಪ್ರೇರಕ, ಕೇವಲ ಓದೇ ಭವಿಷ್ಯ ಎಂದು ಹೇಳಲು ಸಾಧ್ಯವಿಲ್ಲ, ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡು ಪ್ರಾಮಾಣಿಕವಾಗಿ ಮುನ್ನಡೆದರೆ ಅದ್ಭುತ ಯಶಸ್ಸು ಗಳಿಸಲು ಸಾಧ್ಯವಿದೆ, ಕಾಲೇಜು ಬರುವ ದಿನಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿಭಿನ್ನ ಆಯಾಮದಲ್ಲಿ ಕೆಲಸ ಮಾಡಲಿದೆ ಎಂದರು.ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಮೊಂಟು ಪತ್ತಾರ್ ಮಾತನಾಡಿ, ಉತ್ಸವವು ಯುವ ಕಲಾವಿದರು, ಬರಹಗಾರರು, ಛಾಯಾಗ್ರಾಹಕರು, ಸಾಂಪ್ರದಾಯಿಕ ಕಲಾ ಪ್ರಕಾರಗಳ ಅಭ್ಯಾಸಕಾರರು ಮತ್ತು ಜಾನಪದ/ಸಾಂಪ್ರದಾಯಿಕ ನೃತ್ಯಗಳ ಸ್ಪರ್ಧೆಗಳನ್ನು ಒಳಗೊಂಡಿದೆ. ನೆಹರು ಯುವ ಕೇಂದ್ರ ಜಿಲ್ಲಾ ಮಟ್ಟದ ಯುವ ಉತ್ಸವ 2023 ರ ಯಶಸ್ಸಿಗೆ ತಮ್ಮ ಅಮೂಲ್ಯ ಕೊಡುಗೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಪೊಳಿಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು, ಸುಮಾರು ವಿದ್ಯಾರ್ಥಿಗಳು ಐ.ಎ.ಎಸ್. ಆಗುವ ಐ.ಪಿ.ಎಸ್. ಅಗುವ ಕನಸುಗಳು ಇರುತ್ತವೆ ಅದನ್ನು ಸಾಕಾರಗೊಳಿಸಲು ಹೇಗೆ ಶ್ರಮ ಪಡಬೇಕು ಎನ್ನುವದನ್ನ ತಿಳಿದು ಅದರಂತೆ ಅಬ್ಯಾಸ ಮಾಡಬೇಕು, ಗುರಿಯತ್ತ ದಿಟ್ಟ ಹೆಜ್ಜೆ, ತನ್ನನ್ನು ನಂಬಿಕೆ ಇರಿಸಿಕೊಂಡು, ಛಲದೊಂದಿದೆ ಸಾಗಿದರೆ ಯಶಸ್ಸು ನಿಶ್ಚಿತ. ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು, ಇವು ಸಮಯ ವ್ಯರ್ಥ ಅಲ್ಲ ವಿಕಸನಕ್ಕೆ ದಾರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಾಚಾರ್ಯರಾದ ತಿಮ್ಮಾರಡ್ಡಿ ಮೇಟಿ ಮಾತನಾಡಿದರು. ಉಪನ್ಯಾಸಕ ಮಹಾಂತೇಶ ನೆಲಗಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾಗತ ಹಾಗೂ ವಂದನಾರ್ಪಣೆಯನ್ನು ಪ್ರಾಧ್ಯಾಪಕಿ ಡಾ.ಭಾಗ್ಯಜ್ಯೋತಿ ನೆರವೇರಿಸಿದರು. ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ರಾಮರಾವ್ ಬಿರಾದಾರ, ಸಹ ಪ್ರಾಧ್ಯಾಪಕರಾದ ಗಾಯತ್ರಿ ಬಾವಿಕಟ್ಟಿ, ರಷ್ಮಿ, ಡಿ.ಹೆಚ್.ನಾಯಕ, ಶಿವನಾಥ, ಕಾಲೇಜು ಸಿಬ್ಬಂದಿಗಳು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ಯ ಐದು ಪ್ರಕಾರದ ಸ್ಪರ್ಧೆ ಏರ್ಪಡಿಸಿ ನಗದು ಬಹುಮಾನ‌ ನೀಡಲಾಯಿತು. ಅದೇ ರೀತಿ ಆರೋಗ್ಯ ಇಲಾಖೆ, ಕೌಶಲ್ಯ ಅಭಿವೃದ್ಧಿ ಇಲಾಖೆ, ಎಸ್.ಬಿ.ಐ. ಬ್ಯಾಂಕ್, ಜಿಲ್ಲಾ ಮಕ್ಕಳ‌ ರಕ್ಷಣಾ ಘಟಕ ಮತ್ತು ಕೃಷಿ ಇಲಾಖೆಯವರು ಸ್ಟಾಲ್ ಹಾಕಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!