
ಉದಯವಾಹಿನಿ, ಮಾಲೂರು:- ಕೋಲಾರ ಜಿಲ್ಲೆಯ ಕೆರೆಗಳಿಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಹರಿಸುತ್ತಿರುವ ಕೆ.ಸಿ.ವ್ಯಾಲಿ ನೀರನ್ನು ಮೂರನೇ ಬಾರಿ ಶುದ್ದೀಕರಿಸಿ ಕೆರೆಗಳಿಗೆ ಹರಿಸಿ ಅಂತರ್ಜಲ ವೃದ್ಧಿಗೆ ಸಹಕರಿಸುವಂತೆ ಕೋರಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತ್ಯಾವನಹಳ್ಳಿ ಡಾ.ಎಂ.ಗೋಪಾಲ ಗೌಡ ಮನವಿ ಸಲ್ಲಿಸಿದರು.
ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಅಲ್ಲಿನ ಸಂಘ, ಸಂಸ್ಥೆಗಳ ಹೋರಾಟ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಜಿಲ್ಲೆಯ ಜನರಿಗೆ ಕುಡಿಯುವ ನೀರಿಗಾಗಿ ಹಾಗೂ ಅಂತರ್ಜಲ ವೃದ್ಧಿಸಲು 1400 ಕೋಟಿ ರೂಗಳ ವೆಚ್ಚದಲ್ಲಿ ಬೆಂಗಳೂರಿನಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವ ಕೆಸಿ ವ್ಯಾಲಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಅದರಂತೆ ಪ್ರಸ್ತುತ ಜಿಲ್ಲೆಯ ಕೆರೆಗಳಿಗೆ ಎರಡು ಬಾರಿ ಶುದ್ದೀಕರಿಸಿದ ನೀರು ಸರಬರಾಜು ಆಗುತ್ತಿದೆ. ಈ ನೀರು ಸಮರ್ಪಕವಾಗಿ ಶುದ್ದೀಕರಣವಾಗದ ಕಾರಣ ಕೊಳವೆ ಬಾವಿಗಳಲ್ಲಿ ಕಲುಷಿತ ನೀರು ಬರುತ್ತಿದೆ. ಜನರು ದನಕರುಗಳು ಕುಡಿಯಲು ಪ್ರಯೋಜನವಾಗುತ್ತಿಲ್ಲ ರೈತರು ತಮ್ಮ ತೋಟಗಳಲ್ಲಿ ಹಾಕುತ್ತಿರುವ ಬೆಳೆಗಳಿಗೆ ಹಾನಿಯಾಗಿ ರೈತರು ಕೃಷಿಯಿಂದ ನಷ್ಟವನ್ನು ಅನುಭವಿಸುತ್ತಿದ್ದಾರೆ.ನೀರಾವರಿ ತಜ್ಞರು ಸಹ ಮೂರನೇ ಬಾರಿ ಶುದ್ದೀಕರಿಸಿ ಕೆರೆಗಳಿಗೆ ಹರಿಸದಿದ್ದರೆ ಕುಡಿಯುವ ನೀರು ಕಲುಷಿತಗೊಳ್ಳಲಿದೆ. ತೋಟಗಾರಿಕೆ ಬೆಳೆಗಳು ನಾಶವಾಗಿ ರೈತರು ತೊಂದರೆಗೆ ಒಳಗಾಗುವುದನ್ನು ಈಗಾಗಲೇ ತಿಳಿಸಿದ್ದಾರೆ. ಆದ್ದರಿಂದ ಕೋಲಾರ ಜಿಲ್ಲೆಯ ರೈತರಿಗೆ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತಿರುವ ಕೆ.ಸಿ.ವ್ಯಾಲಿ ನೀರನ್ನು ಮೂರನೇ ಬಾರಿ ಶುದ್ದೀಕರಿಸಿ ಕೆರೆಗಳಿಗೆ ಹರಿಸಲು ಪತ್ರದ ಮೂಲಕ ಒತ್ತಾಯ ಮಾಡಲಾಗಿದೆ ಎಂದು ತಿಳಿಸಿದರು.
