ಉದಯವಾಹಿನಿ, ಕೋಲಾರ : ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶ್ರದ್ಧೆಯಿಂದ ಓದಿ ಸಾಧಕರಾಗಿ ಹೊರಹೊಮ್ಮಿ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಉಪಾಧ್ಯಕ್ಷ ಲಕ್ಷ್ಮಿ ಕರೆ ನೀಡಿದರು.
ಶಾಲೆಯ ಆವರಣದಲ್ಲಿ ಸರ್ಕಾರ ಒದಗಿಸಿರುವ ಶೂ ಸಾಕ್ಸ್ಗಳನ್ನು ಮಕ್ಕಳಿಗೆ ವಿತರಿಸಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದೆ, ಖಾಸಗಿ ಶಾಲೆಗಳಿಗಿಂತ ಇಲ್ಲಿ ಉತ್ತಮ ಕಲಿಕೆ, ಸಂಸ್ಕಾರ ಕಲಿಸುವ ಶಿಕ್ಷಕರಿದ್ದಾರೆ ಎಂದರು.
ಸರ್ಕಾರ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ ಶೂ,ಸಾಕ್ಸ್, ಸಮವಸ್ತ್ರ ಒದಗಿಸುತ್ತಿದೆ ಇದರ ಪ್ರಯೋಜನ ಪಡೆಯುವ ಮೂಲಕ ಸಾಧಕರಾಗಿ, ಗೈರಾಗದಿರಿ ಎಂದು ಕಿವಿಮಾತು ಹೇಳಿದರು. ಅರಾಭಿಕೊತ್ತನೂರು ಶಾಲೆಯಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಸೌಲಭ್ಯಗಳಿವೆ, ಕಂಪ್ಯೂಟರ್ ಶಿಕ್ಷಣದ ಸೌಲಭ್ಯವಿದೆ, ನಾಲ್ಕು ಕೊಠಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ, ವಿಜ್ಞಾನ ಪ್ರಯೋಗಾಲಯವಿದೆ ಈ ಎಲ್ಲವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಪ್ರತಿಷ್ಟಿತ ಕಂಪನಿಯ ಶೂಗಳನ್ನು ನೀಡಲಾಗಿದೆ, ಎಸ್ಡಿಎಂಸಿ, ಪೋಷಕರ ಸಮಿತಿ ಪರಿಶೀಲಿಸಿ ಒಪ್ಪಿಗೆ ಪಡೆದ ನಂತರವೇ ಶೂ ವಿತರಿಸಲು ಕ್ರಮವಹಿಸಲಾಗಿದೆ ಎಂದ ಅವರು, ಮುಖ್ಯಶಿಕ್ಷಕರ ವರ್ಗಾವಣೆ ಮತ್ತಿತರ ಕಾರಣಗಳಿಂದ ಶೂ ವಿತರಣೆಗೆ ತಡವಾಗಿದೆ ಎಂದು ಹೇಳಿದರು.
